ಮೈಸೂರು: ಸಾರ್ವಜನಿಕರು ಸಣ್ಣ ಪುಟ್ಟ ಕೆಲಸಗಳಿಗೆ ಕೂಡ ನನ್ನ ಹುಡುಕಿಕೊಂಡು ಬರುತ್ತಾರೆ, ಖಾತೆ, ಪೋಡಿ ಮಾಡಿಸಿ ಅಂತಾ ಜನ ನನ್ನ ಬಳಿ ಬರುತ್ತಿದ್ದಾರೆ. ಅಧಿಕಾರಿಗಳು ಜನರ ಕೆಲಸ ಸರಿಯಾಗಿ ಮಾಡಿದರೆ ನಮ್ಮ ಬಳಿ ಯಾಕೆ ಬರುತ್ತಾರೆ ಸಣ್ಣ ಸಮಸ್ಯೆಗಳಿಗೆ ನನ್ನ ಮನೆ ಬಾಗಿಲಿಗೆ ಬರಬೇಕಾ? ಹಾಗಾದರೆ ನೀವೆಲ್ಲಾ ಅಧಿಕಾರಿಗಳು ಯಾಕೆ ಇದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಮೈಸೂರಿನಲ್ಲಿ ಸತತ 8 ಗಂಟೆಗಳ ಕಾಲ ಕೆಡಿಪಿ ಸಭೆ ನಡೆಸಿದ ಸಿಎಂ, ಕೊನೆಯಲ್ಲಿ ಅಧಿಕಾರಿಗಳ ವಿರುದ್ಧ ಫುಲ್ ಗರಂ ಆದರು. ಅಧಿಕಾರಿಗಳು ಜನರ ಕೆಲಸ ಮಾಡಲು ನೆಪ ಹೇಳುತ್ತಿದ್ದಾರೆ. ಜಾತಿ ಪ್ರಮಾಣಪತ್ರ ಪಡೆಯಲು ನೂರೆಂಟು ಸಲ ಅಲೆಯಬೇಕು. ಸರ್ಕಾರದ ಎಲ್ಲಾ ಸೌಲಭ್ಯ ಪಡೆದರೂ ಕೂಡ ಜನರ ಕೆಲಸ ಯಾಕೆ ಮಾಡುತ್ತಿಲ್ಲ ಜನ ಬರಿಗಾಲಿನಿಂದ ಕಛೇರಿಗಳಿಗೆ ಬರುತ್ತಾರೆ. ನೀವು ಕಾರುಗಳಲ್ಲಿ ಓಡಾಡುತ್ತಿರಿ ಅಲ್ಲವೇ. ಜನ ನಮ್ಮ ಮಾಲೀಕರು, ಅಧಿಕಾರಿಗಳು ಜನಪ್ರತಿನಿಧಿಗಳಲ್ಲ. ನಾವು ಅವರ ಸೇವಕರು ಮಾತ್ರ. ಜನರ ಹಣದಲ್ಲಿ ನಿಮಗೆ, ನಮಗೆ ಎಲ್ಲಾ ರೀತಿಯ ಸೌಲಭ್ಯಗಳು ದೊರಕಿವೆ. ಹೀಗಾಗಿ, ಜನರನ್ನು ಸಣ್ಣ ಪುಟ್ಟ ಕೆಲಸಕ್ಕೆ ಸರ್ಕಾರಿ ಕಚೇರಿಗಳಿಗೆ ಅಲೆಸದಂತೆ ಕೆಲಸ ಮಾಡಬೇಕು ಎಂದು ಖಡಕ್ ಆಗಿ ಆದೇಶಿಸಿದರು. ಇನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ರಾಜಕೀಯ ಮಾಡಬಾರದು ಎಂದು ಹೇಳಿದರು.
ವರದಿಗಾರ
ಎ.ಚಿದಾನಂದ, ವಿಜಯನಗರ.