ಪಾವಗಡ , ಡಿ. 19 : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಸಂಘಚಾಲಕ ಮೋಹನ್ ಭಾಗವತ್ ಬುಧವಾರ ತಾಲೂಕಿನ ಸಿ.ಕೆ.ಪುರ ಗ್ರಾಮದ ಆರ್ಎಸ್ಎಸ್ ಹಿರಿಯ ಸ್ವಯಂಸೇವಕ ದಿವಂಗತ ನಾಗೇಶ್ರಾವ್ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ನಾಗೇಶ್ ರಾವ್ ಪುತ್ರ ಆನಂದ್ ರಾವ್ ಕುಟುಂಬ ಅವರನ್ನು ಹೃದಯಸ್ಪರ್ಶಿ ಸ್ವಾಗತ ನೀಡಿ ಬರಮಾಡಿಕೊಂಡಿತು.
ಗ್ರಾಮದ ಚನ್ನಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸಂಜೆ 6ಕ್ಕೆ ಮೋಹನ್ ಭಾಗವತ್ ಅವರ ಜತೆ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಿ.ಕೆ.ಪುರ ಗ್ರಾಮದ ಸಹ ಸರಕಾರ್ಯವಾಹ ಮುಕುಂದ್, ಅಖಿಲ ಭಾರತ ಸಹ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ, ಜಿಲ್ಲಾ ಸಂಘ ಚಾಲಕ್ ಜಯಪ್ರಕಾಶ್ ಉಪಸ್ಥಿತರಿದ್ದರು.
ದೀಪೋತ್ಸವದಲ್ಲಿ ಭಾಗಿ: ಗ್ರಾಮದ ಜ್ಞಾನವಾಹಿನಿ ಮಹಿಳಾ ಸಂಘ ಹಾಗೂ ಗ್ರಾಮದ ಮಕ್ಕಳ ಕೋಲಾಟ ಹಾಗೂ ಜುಂಜಪ್ಪ ದೇವರ ಉರುಮೆ ಕಾರ್ಯಕ್ರಮ ವೀಕ್ಷಿಸಿದ ಭಾಗವತ್, ನಂತರ ಚನ್ನಕೇಶವ ದೇವಾಲಯದ ದೀಪೋತ್ಸವದಲ್ಲಿ ಭಾಗಿಯಾದರು.
ರಾತ್ರಿ ವಾಸ್ತವ್ಯ: ಮೋಹನ್ ಭಾಗವತ್ ಭೇಟಿ ಹಿನ್ನೆಲೆಯಲ್ಲಿ ವಾಸ್ತವ್ಯ ಹೂಡಿರುವ ಆನಂದ್ ರಾವ್ ಮನೆಗೆ ಬಾರಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಝಡ್ ಪ್ಲಸ್ ಭದ್ರತೆ ಹೊಂದಿರುವ ಭಾಗವತ್ ಅವರ ಬಳಿ ಯಾರೂ ಸುಳಿಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಮಾಜಿ ಸಚಿವ ಸೊಗಡುಶಿವಣ್ಣ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಶಿವಪ್ರಸಾದ್ ಭಾಗವತ್ ಭೇಟಿ ಮಾಡಿದರು.