ದೇವನಹಳ್ಳಿ, ಸೆ. 28: ನಗರವನ್ನು ಸ್ವಚ್ಛತೆ ಮಾಡುವ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಯಾವುದೇ ಖಾಯಿಲೆ ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆಯಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ ತಿಳಿಸಿದರು.
ನಗರದ ಶಾಂತಿ ನಗರದಲ್ಲಿರುವ ಲೀನಾ ರಾಮಯ್ಯ ಆಸ್ಪತ್ರೆಯಲ್ಲಿ ಪುರಸಭಾ ವತಿಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಮಕ್ಕಳನ್ನು ಶೈಕ್ಷಣಿಕವಾಗಿ ಉನ್ನತ ಶಿಕ್ಷಣವನ್ನು ನೀಡುವುದರ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು. ಇಡೀ ನಗರವನ್ನು ಸ್ವಚ್ಛ ಗೊಳಿಸಿ ಸಾರ್ವಜನಿಕರ ಆರೋಗ್ಯದ ಸುಧಾರಣೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷಯವನ್ನು ತೋರಬಾರದು.
ಸ್ವಚ್ಛ ಸಮಾಜ ನಿರ್ಮಾಣಕ್ಕೆ ಪೌರಕಾರ್ಮಿಕರು ದುಡಿಯುತ್ತಿದ್ದಾರೆ. ಪ್ರತಿ ಪೌರಕಾರ್ಮಿಕರಲ್ಲೂ ಆರೋಗ್ಯದ ಬಗ್ಗೆ ಅರಿವು ಮೂಡಬೇಕು. ಆರೋಗ್ಯದಲ್ಲಿ ಏರು ಪೇರು ಇದ್ದರೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಯಲ್ಲಿ ತೋರಿಸಲು ಸರ್ಕಾರದಿಂದ ಹಣವನ್ನು ಬರಿಸುತ್ತದೆ. ಸಕ್ಕರೆ ಖಾಯಿಲೆ, ಹೃದಯಕ್ಕೆ ಸಂಬಂಧಿಸಿದ ಚಿಕಿತ್ಸೆ,ಇಸಿಜಿ, ಲಿಪಿಡ್, ಲಿವರ್ ಚಿಕಿತ್ಸೆ , ರಕ್ತ ಸಂಬಂಧಿಸಿದ, ರಕ್ತ ಒತ್ತಡ, ಕಿಡ್ನಿ, ಯೂರಿನ್, ಎಕ್ಸರೇ ಇನ್ನಿತರೆ ಚಿಕಿತ್ಸೆ ಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರತಿಯೊಬ್ಬರಿಗೂ ಸ್ವಚ್ಛ ಗಾಳಿ, ಶುದ್ಧ ಕುಡಿಯುವ ನೀರು, ಪೂರಕ ಪೌಷ್ಠಿಕಾಂಶಯುಕ್ತ ಆಹಾರ ಅವಶ್ಯ, ಉತ್ತಮ ಪರಿಸರ ಕಾಯ್ದು ಕೊಳ್ಳಲು ಶ್ರಮಿಸುತ್ತಿರುವ ಪೌರಕಾರ್ಮಿಕರು ರಸ್ತೆ ಬದಿಯಲ್ಲಿ ಮಣ್ಣನ್ನು ತೆರವು ಗೊಳಿಸುತ್ತಾರೆ. ದಿನನಿತ್ಯ ಗಲೀಜು ಆಗಿರುವ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಾರೆ. ನಿಜಕ್ಕೂ ಇಂತಹವರ ಕಲ್ಯಾಣ ಆಗಬೇಕಾಗಿದೆ ಎಂದರು.
ಈ ವೇಳೆಯಲ್ಲಿ ಪುರಸಭಾ ಅಭ್ಯಂತರ ನೇತ್ರಾವತಿ, ಹಿರಿಯ ಆರೋಗ್ಯ ಸಹಾಯಕರಾದ ಬಿಜಿ, ತೃಪ್ತಿ, ವೈಧ್ಯ ಡಾ. ರಂಗನಾಥ್ ಮತ್ತಿತರರು ಇದ್ದರು.