ಯಡಿಯೂರಪ್ಪ ಹೇಳಿಕೆಯನ್ನು ರಿಟ್ವೀಟ್ ಮಾಡಿ ವ್ಯಂಗ್ಯವಾಡಿದ ಪಾಕ್ ಪ್ರಧಾನಿಯ ಪಕ್ಷ

ಯಡಿಯೂರಪ್ಪ ಹೇಳಿಕೆಯನ್ನು ರಿಟ್ವೀಟ್ ಮಾಡಿ ವ್ಯಂಗ್ಯವಾಡಿದ ಪಾಕ್ ಪ್ರಧಾನಿಯ ಪಕ್ಷ

ಬೆಂಗಳೂರು, ಫೆ.28, ನ್ಯೂಸ್‍ ಎಕ್ಸ್ ಪ್ರೆಸ್: ಪಾಕ್ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯಿಂದ ಬಿಜೆಪಿಗೆ ಆಗಲಿರುವ ರಾಜಕೀಯ ಲಾಭಗಳ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದ ಹೇಳಿಕೆಯನ್ನು ಪಾಕ್ ಪ್ರಧಾನಿ ಇಮ್ರಾನ್‌ ಖಾನ್ ನೇತೃತ್ವದ ರಾಜಕೀಯ ಪಕ್ಷ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ತನ್ನ ಟ್ವಿಟರ್ ಖಾತೆ @PTIofficial ಗುರುವಾರ ಟ್ವೀಟ್ ಮಾಡಿ, ವ್ಯಂಗ್ಯವಾಡಿದೆ.

ವಾಯುದಾಳಿಯು ಕರ್ನಾಟಕದಲ್ಲಿ 22 ಸ್ಥಾನಗಳನ್ನು ಗೆಲ್ಲಲು ನೆರವಾಗಲಿದೆ: ಯಡಿಯೂರಪ್ಪ

‘ಜೈಷ್-ಎ-ಮೊಹಮದ್ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ನಡೆಸಿದ ದಾಳಿಯಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅನುಕೂಲವಾಗಲಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 22 ಸ್ಥಾನಗಳಲ್ಲಿ ಬಿಜೆಪಿ ವಿಜಯ ಸಾಧಿಸಲಿದೆ’ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಯಡಿಯೂರಪ್ಪ ಹೇಳಿಕೆಯ ವಿಡಿಯೊವನ್ನು ಪಿಟಿಐ ಟ್ವೀಟ್ ಮಾಡಿದೆ.

‘ವಾಯುಪಡೆಯ ವರ್ತನೆ, ಯುದ್ಧಕೋರತನ, ಬಂಧನದಲ್ಲಿರುವ ಯೋಧ, ಗಡಿಯ ಎರಡೂ ಭಾಗಗಳಲ್ಲಿ ಆಪತ್ತಿನಲ್ಲಿರುವ ಲಕ್ಷಾಂತರ ಜನರ ಬದುಕು ನಿಮಗೆ 22 ಸ್ಥಾನಗಳನ್ನು ಗೆಲ್ಲುವ ಮಾರ್ಗವಾಗಿ ಕಾಣಿಸುತ್ತಿದೆ. ಯುದ್ಧವೆನ್ನುವುದು ಚುನಾವಣೆಯ ಆಟವೇ?’ ಎಂದು ಪಿಟಿಐ ಪಕ್ಷ ಟ್ವಿಟರ್‌ನಲ್ಲಿ ಪ್ರಶ್ನಿಸಿದೆ.

ಹಿರಿಯ ಪತ್ರಕರ್ತೆ ಬರ್ಖಾ ದತ್ @BDUTT ಈ ಮೊದಲು ಯಡಿಯೂರಪ್ಪ ಹೇಳಿಕೆಯನ್ನು ವಿಶ್ಲೇಷಿಸಿ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಪಿಟಿಐ, ‘ನಿಮ್ಮನ್ನು ಯುದ್ಧದತ್ತ ದೂಡಲಾಗುತ್ತಿದೆ ಎಂಬ ಸಂಗತಿ ಈಗಲಾದರೂ ನಿಮಗೆ ಅರ್ಥವಾಗಿರಬಹುದು ಎಂದುಕೊಳ್ಳುತ್ತೇವೆ. ಚುನಾವಣೆಯನ್ನು ಗೆಲ್ಲಲೇಬೇಕೆಂದು ಹಾತೊರೆಯುತ್ತಿರುವ ಜನರನ್ನು ಬಿಟ್ಟುಹಾಕಿ. ಯುದ್ಧವೆನ್ನುವುದು ಯಾವುದೇ ದೇಶದ ಹಿತಾಸಕ್ತಿಯನ್ನು ಕಾಪಾಡುವುದಿಲ್ಲ. ಅದರ ಸೈನಿಕರು ಮತ್ತು ನಾಗರಿಕರು ಜೊತೆಜೊತೆಗೆ ಹಾನಿ ಅನುಭವಿಸುತ್ತಾರೆ. ಒಬ್ಬ ಮನುಷ್ಯನ ರಾಜಕೀಯ ಹಿತಾಸಕ್ತಿಗಾಗಿ ಯುದ್ಧ ಆರಂಭಿಸುವುದು ಸಲ್ಲದು’ ಎಂದು ಹೇಳಿತ್ತು.

ಯಡಿಯೂರಪ್ಪ ಹೇಳಿಕೆಯನ್ನು ಪಿಟಿಐ ಪಕ್ಷವು ವಿಶ್ವಮಟ್ಟದಲ್ಲಿ ಭಾರತಕ್ಕೆ ಮಸಿ ಬಳಿಯಲು ಉಪಯೋಗಿಸುತ್ತಿರುವ ರೀತಿಯನ್ನು ಬರ್ಖಾದತ್ ಖಂಡಿಸಿದ್ದರು. ‘ಯಡಿಯೂರಪ್ಪ ಹೇಳಿಕೆಯನ್ನು ನಿಮ್ಮ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳಲು ನೀವು ಹಾತೊರೆಯುತ್ತಿದ್ದೀರಿ. ಪಾಕಿಸ್ತಾನದ ಅಧಿಕೃತ ರಾಜಕೀಯ ಪಕ್ಷವೊಂದು ಹೀಗೆ ಮಾಡುತ್ತದೆ ಎಂದು ನಾನು ಊಹಿಸಿರಲಿಲ್ಲ. ಇದು ಒಪ್ಪಲು ಸಾಧ್ಯವಿಲ್ಲದ, ಪ್ರಚೋದನಾಕಾರಿ ಮತ್ತು ಅನುಚಿತ ಹೇಳಿಕೆ. ಭಯೋತ್ಪಾದನೆಯನ್ನು ಇಡೀ ಭಾರತ ಒಂದೇ ದನಿಯಾಗಿ ಖಂಡಿಸುತ್ತದೆ. ನಮ್ಮ ದೇಶದ ರಾಜಕೀಯವನ್ನು ನಾವು ನೋಡಿಕೊಳ್ಳುತ್ತೇವೆ. ದಯವಿಟ್ಟು ನಿಮ್ಮ ಕೆಲಸಗಳನ್ನು ನೀವು ಮಾಡಿಕೊಳ್ಳಿ’ ಎಂದು ಬರ್ಖಾ ತಿರುಗೇಟು ನೀಡಿದ್ದರು.

ಬರ್ಖಾ ಮಾತಿಗೆ ಪ್ರತಿಕ್ರಿಯಿಸಿದ್ದ ಪಿಟಿಐ, ‘ನಿಮ್ಮ ದೇಶದ ಒಳರಾಜಕೀಯ ನಮ್ಮ ದೇಶವನ್ನು ಯುದ್ಧಕ್ಕೆ ದೂಡುತ್ತಿದೆ. ಹೀಗಾಗಿ ಇದು ನಮ್ಮ ತಲೆಬಿಸಿಯೂ ಆಗಿದೆ. ಸತ್ಯ ಏನು ಎಂಬುದು ಇನ್ನಾದರೂ ಅರಿತುಕೊಳ್ಳಿ. ನಾವೂ ಸಹ ಭಯೋತ್ಪಾದನೆಯ ಸಂತ್ರಸ್ತರೇ ಆಗಿದ್ದೇವೆ. ಮಾತುಕತೆಯಲ್ಲಿ ಪರಿಹಾರವಿದೆ. ಯುದ್ಧಕ್ಕೆ ಬೇಡ ಎನ್ನಿ’ ಎಂದು ಹೇಳಿತ್ತು.

ಫ್ರೆಶ್ ನ್ಯೂಸ್

Latest Posts

Featured Videos