ಬೆಂಗಳೂರು: ಕೇಂದ್ರ ಸರಕಾರ ಮಂಡಿಸಿರುವ ಆಯವ್ಯಯ ಕೇವಲ ರಾಜಕೀಯ ದೃಷ್ಟಿ ಹೊಂದಿದ್ದು, ರೈತರು, ಸಾಮಾನ್ಯ ಜನರು, ಯುವಜನರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ವಿಶ್ಲೇಷಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮರಿಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಮಂಡಿಸಿರುವುದು ಅಂಪೂರ್ಣ ಬಜೆಟ್ ಅಲ್ಲ. ಇದು ಕೇವಲ ಲೆಕ್ಕಾನುದಾನ ಅನುಮತಿ ಪಡೆಯಲು ಮಾತ್ರ. ಇದರಲ್ಲೂ ಯಾವುದೇ ನಿರೀಕ್ಷಿತ ಯೋಜನೆಗಳನ್ನು ಘೋಷಿಸದೇ ಇರುವುದು ನಿರೀಕ್ಷೆ ಹುಸಿ ಮಾಡಿದೆ. ಆದ್ಯತಾ ಇಲಾಖೆಗಳಿಗೂ ನಿರೀಕ್ಷಿತ ಅನುದಾನ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದರು.
ಕೆಲವೇ ತಿಂಗಳಲ್ಲಿ ಬರಲಿರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಕೊಟ್ಟಿರುವ ಬಜೆಟ್ ಇದಾಗಿದೆ, ಆಯವ್ಯಯದಲ್ಲಿ ಇವರ ಸಾಧನೆಗಳ ಹೆಸರಿನಲ್ಲಿ ಸತ್ಯಕ್ಕೆ ದೂರವಾದ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಆರ್ಥಿಕ ಪರಿಸ್ಥಿತಿ, ಉದ್ಯೋಗ ಕಲ್ಪಿಸಿಕೊಡುವ ಯಾವ ಯೋಜನೆಯೂ ಇವರು ನೀಡಿಲ್ಲ ಎಂದರು.
ಹಳೇ ಗಾಡಿಗೆ ಆಯುಧ ಪೂಜೆ ಮಾಡಿದಂತೆ ಈ ಬಜೆಟ್ ಇದೆ. ಆಯವ್ಯಯದಲ್ಲಿ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಸಾಲಮನ್ನಾ ಘೋಷಿಸಬಹುದಿತ್ತು. ಆದರೆ ಕೇವಲ ಆರು ಸಾವಿರ ರೂಪಾಯಿ ಖಾತೆಗೆ ಹಾಕುವುದಾಗಿ ಹೇಳಿದ್ದಾರೆ. ಅದೂ 3 ಕಂತಿನಲ್ಲಿ. ಕೇವಲ 2 ಸಾವಿರ ರೂಪಾಯಿಗೆ ರೈತರು ಕಾಯಬೇಕೆ? ಎಂದು ಪ್ರಶ್ನಿಸಿದರು.
6 ಸಾವಿರ ನೀಡುವ ಯೋಜನೆಗೆ, ಹೆಚ್ಚೆಂದರೆ 8,500 ಕೋಟಿ ರೂ. ಆಗಲಿದೆ. ಇಷ್ಟು ಕಡಿಮೆ ಮೊತ್ತದಲ್ಲಿ ರೈತರನ್ನು ತೃಪ್ತಿ ಪಡಿಸಲು ಹೊರಟಿದ್ದು ಸರಿಯಲ್ಲ. ಕನಿಷ್ಠ ಪಕ್ಷ ರೈತರ ಬೆಳೆಗೆ ಸೂಕ್ತ ಬೆಲೆ ಕೊಡಿಸುವ ನಿಟ್ಟಿನಲ್ಲಿ ಯೋಜನೆ ತರಬಹುದಿತ್ತು. ಕೈಗಾರಿಕೆ ಕ್ಷೇತ್ರಕ್ಕೂ ಯಾವುದೇ ಉತ್ತೇಜನ ನೀಡಿಲ್ಲ. ಪ್ರಧಾನಿ ಅವರ ಮೇಕ್ ಇನ್ ಇಂಡಿಯಾ ಎಂಬ ಹೇಳಿಕೆ ಬಿಟ್ಟರೆ, ಕೈಗಾರಿಕೆ ಕ್ಷೇತ್ರದ ಪ್ರೋತ್ಸಾಹ ನೀಡಿಲ್ಲ ಎಂದು ಮೋದಿಯನ್ನು ಟೀಕಿಸಿದರು.
ನೋಟು ಅಮಾನ್ಯೀಕರಣದಿಂದ ಎಷ್ಟೆಲ್ಲ ಕಪ್ಪು ಹಣ ಬಂದಿದೆ ಎಂಬ ಮಾಹಿತಿ ಬಹಿರಂಗ ಪಡಿಸಬೇಕಿತ್ತು. ಸಮಾಜ ಕಲ್ಯಾಣ ಇಲಾಖೆಗೆ ಕೇವಲ 70 ಸಾವಿರ ಕೋಟಿ ರೂ. ಮಾತ್ರ ಮೀಸಲಿಟ್ಟಿದ್ದಾರೆ. ಕರ್ನಾಟಕ ರಾಜ್ಯ ಒಂದೇ 27 ಕೋಟಿ ರೂ. ನೀಡಿದ್ದೇವೆ. ಎಸ್ಸಿ ಎಸ್ಟಿ ಅವರಿಗು ಬಜೆಟ್ನಲ್ಲಿ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗಿದ್ದು ಬಿಟ್ಟರೆ, ಸರಕಾರಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ಸರಕಾರ ಸಾಲಮನ್ನಾ ಮಾಡಿದ್ದ ವೇಳೆ ರೈತರಿಗೆ ಲಾಲಿಪಪ್ ನೀಡಿದ್ದಾರೆ ಎಂದು ಪ್ರಧಾನಿ ಹೇಳಿದ್ದರು.ಆದರೆ ಆ ಲಾಲಿಪಪ್ ಕೊಡುವಲ್ಲಿಯೂ ಕೇಂದ್ರ ವಿಫಲವಾಗಿದೆ ಎಂದು ಹೇಳಿದರು.