ಬೆಂಗಳೂರು: ಸಾವಯವ ಕೃಷಿಕ ಮತ್ತು ಸಾವಯವ ಕೃಷಿ ಮಾರ್ಗದರ್ಶಕ ನಾಡೋಜ ಎಲ್. ನಾರಾಯಣರೆಡ್ಡಿ (80) ಅವರು ಇಂದು ಮುಂಜಾನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸ್ವಗ್ರಾಮ ಮರಳೇನಹಳ್ಳಿಯಲ್ಲಿ ನಿಧನರಾಗಿದ್ದಾರೆ.
ನಾಲ್ಕು ದಶಕಗಳಿಂದ ಸಾವಯವ ಕೃಷಿ ಮಾಡುತ್ತಾ, ಸಾವಯವ ಕೃಷಿ ಪದ್ಧತಿ ಕುರಿತು ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದ ನಾರಾಯಣರೆಡ್ಡಿ ಅವರ ಕೃಷಿ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಅವರಿಗೆ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಲ್ಲದೆ ಅವರಿಗೆ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಅವರು ಹಾಲೆಂಡ್, ಜಪಾನ್, ಜರ್ಮನಿ ಸೇರಿದಂತೆ ಹದಿನೈದು ದೇಶಗಳ ಕೃಷಿ ವಿಶ್ವ ವಿದ್ಯಾನಿಲಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಉಪನ್ಯಾಸ ನೀಡಿದ್ದಾರೆ. ಜಪಾನ್ನ ಮಸನವೊ ಫುಕುವೊಕ ಅವರೊಂದಿಗೂ ಒಡನಾಟ ಇತ್ತು.
ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಇಂದು ಸಂಜೆ 3ಕ್ಕೆ ವರ್ತೂರಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.