ಮಾಲೂರು: ಸಾಮಾಜಿಕ ನ್ಯಾಯ ಅಸ್ಪೃಶ್ಯತೆ ಅಧಿಕಾರಿಗಳ ಅಟ್ಟಹಾಸ, ಭೂ ಮಾಫಿಯಗಳ ದೌರ್ಜನ್ಯ ಕಡಿಮೆಯಾಗದೇ ಇರುವುದು ತುಂಬಾ ನೋವಿನ ಸಂಗತಿಯೆಂದು ಕರ್ನಾಟಕ ದಲಿತ ಸಿಂಹ ಸೇನೆ ರಾಜ್ಯಾಧ್ಯಕ್ಷ ಹೂವಳ್ಳಿ ಪ್ರಕಾಶ್ ದೂರಿದರು.
ತಾಲೂಕಿನ ನೊಸಗೆರೆ ಗ್ರಾ.ಪಂ.ವ್ಯಾಪ್ತಿಯ ಮಾರಸಂದ್ರ ಗ್ರಾಮದ ಬಳಿ ಇರುವ ಆಲ್ ಕಾರ್ಗೋ ಲಾಜಿಸ್ಟಿಕ್ ಲಿಮಿಟೆಟ್ ಕಂಪನಿ ಮುಂಭಾಗದಲ್ಲಿ ಕರ್ನಾಟಕ ದಲಿತ ಸಿಂಹ ಸೇನೆ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನದಡಿಯಲ್ಲಿ ಮಹಾನ್ ನಾಯಕರುಗಳು ದೌರ್ಜನ್ಯಗಳ ವಿರುದ್ಧ ಹೋರಾಟ ಮಾಡಿದ್ದಾರೆ. ಇಷ್ಟೆಲ್ಲಾ ಹೋರಾಟಗಳ ಮಧ್ಯೆಯೂ ನಮ್ಮನ್ನಾಳುವ ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಹಿಟ್ಲರ್ ಸಾಮಾಜ್ಯವನ್ನು ಸ್ಥಾಪಿಸಲು ಮುಂದಾಗಿದ್ದಾರೆ ಎಂದರು.
ಅದಷ್ಟು ಬೇಗ ಬೇಡಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸರ್ಕಾರಿ ಭೂಮಿಯನ್ನು ಉಳಿಸುವಂತೆ ತಹಶೀಲ್ದಾರ್ ಎಂ.ಮಂಜುನಾಥ್, ಸಿಪಿಐ ಕೆ.ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ದಲಿತ ಸಿಂಹ ಸೇನೆ ಯುವ ಘಟಕ ರಾಜ್ಯಧ್ಯಕ್ಷ ಮಾರಸಂದ್ರ ಮಂಜುನಾಥ್, ಜಿಲ್ಲಾ ಅಧ್ಯಕ್ಷ ನಾಗನಾಳ ಶಂಕರ್, ಜಿಲ್ಲಾ ಉಪಾಧ್ಯಕ್ಷರ ಹೂಹಳ್ಳಿ ನಾರಾಯಣಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಅಪ್ಪಿ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾಲನೂರ್ ಶ್ರೀನಿವಾಸ್, ನಗರ ಅಧ್ಯಕ್ಷ ಜಭಿವುಲ್ಲಾಬೇಗ್, ಪ್ರಧಾನ ಕಾರ್ಯದರ್ಶಿ ನೊಸೆಗೆರೆ ಆನಂದ್, ಅಲಿ, ತಿಮ್ಮರಾಯಪ್ಪ, ಅಮರಮ್ಮ, ಸುಶೀಲಮ್ಮ ಹಾಜರಿದ್ದರು.