ಬೆಂಗಳೂರು,ಜ. 13 : ಸಮಾಜದಲ್ಲಿ ಸಾಕಷ್ಟು ಬದಲಾವಣೆ ತರಲು ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರು ಶ್ರಮಿಸಿದ್ದರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು. ನಗರದ ವಿದ್ಯಾಪೀಠದಲ್ಲಿ ಶ್ರೀ ವಿಶ್ವೇಶ್ವತೀರ್ಥರ ಬೃಂದಾವನಕ್ಕೆ ಭಕ್ತಿಪೂರ್ವಕ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇಜಾವರ ಮಠದಲ್ಲೆ ಇಫ್ತಿಯಾರ್ ಕೂಟ ಮಾಡಿ ಸಮಾಜಕ್ಕೆ ಸುಧಾರಣೆಯನ್ನು ತೋರಿಸಿಕೊಟ್ಟಿದ್ದರು ಎಂದು ಸ್ಮರಿಸಿದರು.
ಶ್ರೀಗಳು ತಮ್ಮ ಪರ್ಯಾಯದಲ್ಲಿ ಅನೇಕ ಕೆಲಸ ಮಾಡಿದ್ದಾರೆ. ದಲಿತ ಕೇರಿಗೆ ಹೋಗಿ ಅಸ್ಪಶ್ಯತೆ ನಿವಾರಣೆ ಕೆಲಸ ಮಾಡಿದ್ದು ತೋರಿಕೆಗಲ್ಲ. ಅನೇಕ ಬಾರಿ ನಾನು, ನನ್ನ ಪತ್ನಿ ಮಠಕ್ಕೆ ಹೋಗಿ ಶ್ರೀಗಳ ಆಶೀರ್ವಾದ ಪಡೆದಿದ್ದೇವೆ. ಬೃಂದಾವನಕ್ಕೆ ಬಂದು ನಮನ ಸಲ್ಲಿಸಿದ್ದೇನೆ. ನನಗೂ ಕೃಷ್ಣ ಮಠಕ್ಕೂ 40 ವರ್ಷಕ್ಕಿಂತ ಹೆಚ್ಚು ಒಡನಾಟವಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆದಾಗ ನಾನು ಹೋಗಿದ್ದೆ. ಅನೇಕ ಬಾರಿ ಶ್ರೀಗಳನ್ನು ಭೇಟಿ ಮಾಡಿ ದರ್ಶನ ಮಾಡಿಕೊಂಡು ಬಂದಿದ್ದೇನೆ ಎಂದರು.