ಚಿತ್ರದುರ್ಗ, ಅ. 8 : ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಬಳ ತಡವಾಗಿದೆ ಅದಕ್ಕಾಗಿ ನಾನು ವಿಷಾದಿಸುತ್ತೇನೆ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಅವರು ಸೋಮವಾರ ಹೇಳಿದ್ದಾರೆ. ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನಿರ್ವಾಹಕ, ಚಾಲಕರರಿಗೆ ಸಂಬಳ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ತಿಂಗಳು 5 ರಿಂದ 10 ನೇ ತಾರೀಖಿನೊಳಗೆ ಸಂಬಳ ಆಗ್ತಿತ್ತು. ದಸರಾ ಹಬ್ಬ ಇದೋದರಿಂದ ಮುಂಚಿತವಾಗಿ ಸಂಬಳ ಆಗಬೇಕಿತ್ತು. ಬಿಎಂಟಿಸಿ ಸಿಬ್ಬಂದಿಗೆ ಮುಂಚಿತವಾಗಿ 5 ಸಾವಿರ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಇನ್ನು ನಿಗಮದಲ್ಲಿ ಹಣಕಾಸಿನ ತೊಂದರೆ ಇದೆ, ಸರ್ಕಾರದಿಂದಲೂ ಹಣ ಬಂದಿಲ್ಲ, ಅಲ್ಲದೇ ಮೂರು ದಿನಗಳಿಂದ ಬ್ಯಾಂಕ್ ರಜೆ ಇದೆ. 9ನೇ ತಾರೀಖು ಸಂಪೂರ್ಣ ಸಂಬಳ ಪಾವತಿಸಲಾಗುವುದು ಎಂದು ಸಾರಿಗೆ ನೌಕರರಿಗೆ ಭರವಸೆ ನೀಡಿದರು.