ಬೆಂಗಳೂರು, ಆ. 14. : ಈ ರಾಜಕಾಣಿಗಳೇ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ. ಅಧಿಕಾರ ಸಿಗೋ ಮುಂಚೆ ಹೆಗಲ ಮೇಲೆ ಹಸಿರು ಟವಲ್ ಹಾಕೊಂಡು ರೈತರ ಸಮಸ್ಯೆ, ರೈತರ ಕಲ್ಯಾಣ ಅಂತಿದ್ದೋರು ಈಗ ಅಧಿಕಾರಕ್ಕೆ ಬಂದ ಮೇಲೆ ಟವೆಲ್ ಒದರಿ, ವರಸೆ ಬದಲಿಸಿ ಬಿಟ್ರಲ್ಲಾ..! ಹಿಂದೆಂದೂ ಕಂಡು ಕೇಳರಿಯದ ಪ್ರವಾಹದ ಪ್ರಹಾರದಿಂದ ಜನ ತತ್ತರಿಸಿ ಹೋಗಿದ್ದಾರೆ. ಸಂದರ್ಭದಲ್ಲಿ ಪರಿಹಾರ ಕೊಡಿ ಅಂದ್ರೆ, ‘ನಾವು ನೋಟು ಪ್ರಿಂಟ್ ಮಾಡೋಲ್ಲ’ ಅಂತೀರಲ್ಲಾ ಸರಿನಾ..? ಇದು ನ್ಯಾಯನಾ..?!
ಕೃಷಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘’’ಬೆಳೆ ಹಾನಿ ಅಂದಾಜು ಸಿದ್ಧಪಡಿಸಲು ಅವಸರ ಬೇಡ. ಕೇಳಿದಷ್ಟು ಹಣ ನೀಡಲು ಸರ್ಕಾರ ನೋಟ್ ಪ್ರಿಂಟ್ ಮಾಡಲ್ಲ. ಸಮಯ ತಗೊಂಡು ನಿಧಾನವಾಗಿ ವರದಿ ನೀಡಿ’ ಅಂತಾ ಸೂಚನೆ ನೀಡಿದ್ದಾರೆ.
ಸರ್ಕಾರ ಬೀಳಿಸೋದಿಕ್ಕೆ, ಅತೃಪ್ತ ಶಾಸಕರಿಗೆ ಸ್ಪೆಷಲ್ ಫ್ಲೈಟ್ ವ್ಯವಸ್ಥೆ ಮಾಡೋದಿಕ್ಕೆ, ಐಷಾರಾಮಿ ಹೊಟೇಲ್ ವಾಸ್ತವ್ಯ ಮಾಡಿಸೋದಿಕ್ಕೆ, ಅವರ ಭದ್ರತೆಗೆ ಬೌನ್ಸರ್ ಗಳನ್ನು ಇಡೋದಿಕ್ಕೆ ನಿಮ್ಮ ಬಳಿ ನೋಟು ಪ್ರಿಂಟ್ ಮಾಡೋ ಯಂತ್ರ ಇತ್ತೇ, ಯಡಿಯೂರಪ್ಪನವರೇ..? ಬೇಸಿಗೆಯಲ್ಲಿ ನೀರಿಲ್ಲದೆ ಒಣಗಿ ಹೋದವು. ತಡವಾಗಿ ಬಂದ ಮುಂಗಾರು ನಂಬಿ ಮಾಡಿದ ಬಿತ್ತನೆ ಪಸಲಾಗುವ ಮೊದಲೇ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ರೈತರು ದಿಕ್ಕು ಕಾಣದೆ ಕೂತಿದ್ದಾರೆ. ಸಾವಿರಾರು ಜನ ಮನೆ ಇಲ್ಲದೆ ನಿರಾಶ್ರಿತರಾಗಿದ್ದಾರೆ. ರಾಜ್ಯದ ಸಹೃದಯಿ ಜನರ ಸಹಾಯ, ನೆರವಿನಿಂದ ಹಲವು ಸಂತ್ರಸ್ತರ ಕೇಂದ್ರಗಳಲ್ಲಿ ಊಟ, ಬಟ್ಟೆ ಮತ್ತಿತರೆ ವ್ಯವಸ್ಥೆ ತಕ್ಕ ಮಟ್ಟಿಗೆ ಆಗುತ್ತಿದೆ. ರಾಜ್ಯ ಅಥವಾ ಕೇಂದ್ರದಿಂದ ನೀವೇನು ಮಾಡಿದ್ದೀರಿ ಸ್ವಾಮಿ? ಪ್ರವಾಹ ಸ್ಥಳಕ್ಕೆ ಹೋಗಿ ಇಷ್ಟು ಕೊಡ್ತೀವಿ, ಅಷ್ಟು ಕೊಡ್ತೀವಿ ಅಂತಾ ಪುಗಸಟ್ಟೆ ಆಶ್ವಾಸನೆ ನೀಡಿದ್ದು ಬಿಟ್ಟರೆ ಬೇರೇನು ಮಾಡಿದ್ದೀರಿ? ಅದರ ಮಧ್ಯೆ ಇಂತಹ ಬೇಜವಾಬ್ದಾರಿ ಹೇಳಿಕೆ ಬೇರೆ. ನಿಮಗೆ ಮನಸ್ಸಾದ್ರು ಹೇಗೆ ಬರುತ್ತೆ?