ಪಾಂಡವಪುರ: ಕೆಆರ್ಎಸ್ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ ಮಾಡುವುದರಿಂದ ಅಣೆಕಟ್ಟೆಗೆ ಯಾವುದೇ ಅಪಾಯವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿ, ಕೆಆರ್ಎಸ್ ಮೈಸೂರು ಅರಸರ ಕೊಡುಗೆ, ಕೋಟ್ಯಂತರ ಜನರ ಜೀವನಾಡಿ ಎಂಬ ಅರಿವು ನನಗಿದೆ. ಕೆಆರ್ಎಸ್ ಅಣೆಕಟ್ಟು ಒಡೆಯುವುದಕ್ಕಾಗಿ ಈ ಯೋಜನೆ ರೂಪಿಸಿಲ್ಲ. ಅಂತಹ ಕೆಲಸವನ್ನು ನಾನೆಂದಿಗೂ ಮಾಡುವುದಿಲ್ಲ. ಅಣೆಕಟ್ಟೆಗೆ ಇನ್ನೂ ಹೆಚ್ಚಿನ ಸುರಕ್ಷತೆ ಒದಗಿಸಿ, ಅದನ್ನು ಸುಭದ್ರ ಸ್ಥಿತಿಯಲ್ಲಿ ಕಾಪಾಡಲಾಗುವುದು. ಡಿಸ್ನಿಲ್ಯಾಂಡ್ ನಿರ್ಮಾಣದಿಂದ ಸುತ್ತಮುತ್ತಲ ಗ್ರಾಮದ ಜನರನ್ನು ಒಕ್ಕಲೆಬ್ಬಿಸಲಾಗುವುದು ಎನ್ನುವುದು ಸುಳ್ಳು. ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ. ಹೊಸ ಭೂಮಿಯನ್ನು ಭೂ ಸ್ವಾಧೀನ ಮಾಡುವುದೂ ಇಲ್ಲ. ಯೋಜನೆಯಿಂದ ಮೈಸೂರು, ಮಂಡ್ಯ, ಹಾಸನ ಭಾಗದ 50 ಸಾವಿರ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದರು.