ಬೆಂಗಳೂರು, ಮಾ, 23, ನ್ಯೂಸ್ ಎಕ್ಸ್ ಪ್ರೆಸ್: 2009ರಲ್ಲಿ ಸಚಿವರಾಗಿದ್ದ ಶರದ್ ಪವಾರ್ಗೆ ಬಿಎಸ್ವೈ ಪತ್ರ ಬರೆದಿದ್ದರು. ಈ ಪತ್ರವನ್ನು ಇಂದು ಬಿಎಸ್ವೈ ಆಪ್ತರು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ರಿಲೀಸ್ ಮಾಡಿದ ಡೈರಿಯಲ್ಲಿರುವ ಸಹಿಗೂ ಈ ಸಹಿಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಯೂರಿಯಾ ಬಗ್ಗೆ ಜುಲೈ 2009ರಲ್ಲಿ ಬಿಎಸ್ವೈ ಬರೆದಿದ್ದ ಪತ್ರವನ್ನೂ ಬಿಡುಗಡೆ ಮಾಡುವ ಮೂಲಕ ಸಹಿಯ ಪ್ರತಿ ಅಕ್ಷರ ವ್ಯತ್ಯಾಸ ತೋರಿಸಿ ಮಾರ್ಕ್ ಮಾಡಿ ದಾಖಲೆ ಬಿಡುಗಡೆಗೊಳಿಸಿದ್ದಾರೆ.
ಡೈರಿಯಲ್ಲಿರೋದು ಯಡಿಯೂರಪ್ಪ ಸಹಿ ಅಲ್ಲವೇ ಅಲ್ಲ ಎಂದು ಹೇಳಲಾಗುತ್ತಿದ್ದು, ಡೈರಿಯಲ್ಲಿರುವ ಸಹಿಗೂ ಬಿಎಸ್ವೈ ಅವರ ಸಹಿಗೂ ವ್ಯತ್ಯಾಸ ಇದೆ ಎಂದು ಸಹಿಯ ಅಸಲಿ, ನಕಲಿ ಬಗ್ಗೆ ದಾಖಲೆಯನ್ನು ಯಡಿಯೂರಪ್ಪ ಆಪ್ತರು ಬಿಡುಗಡೆ ಮಾಡಿದ್ದಾರೆ. ಹಾಗಾದರೆ ಶುಕ್ರವಾರ ಕಾಂಗ್ರೆಸ್ ಬಿಡುಗಡೆ ಮಾಡಿದ ಡೈರಿಯಲ್ಲಿರುವ ಯಡಿಯೂರಪ್ಪನವರ ಸಹಿ ನಕಲಿಯೋ ಅಥವಾ ಅಸಲಿಯೋ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ. ಇತ್ತ ಸಿಬಿಡಿಟಿ ಕೂಡ ಇದು ಬಿಎಸ್ವೈ ಅವರ ಕೈ ಬರಹ ಅಲ್ಲ ಎಂದು ಸ್ಪಷ್ಟನೆ ನೀಡಿದೆ.