ಚಿಕ್ಕಬಳ್ಳಾಪುರ, ಏ. 22, ನ್ಯೂಸ್ ಎಕ್ಸ್ ಪ್ರೆಸ್: ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಪೊಲೀಸರು ದರ್ಪತೋರಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಗ್ರಾಮಪಂಚಾಯತ್ನಲ್ಲಿ ನಡೆದಿದೆ. ನಿನ್ನೆ (ಭಾನುವಾರ) ಸೂಕ್ತ ಕುಡಿಯುವ ನೀರಿಗಾಗಿ ನೀಡಬೇಕೆಂದು ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಪೊಲೀಸರ ಹೊಡೆತಕ್ಕೆ ಸ್ಥಳದಲ್ಲೇ ನಾಲ್ಕು ಜನ ಕುಸಿದು ಬಿದಿದ್ದರು. ಪೊಲೀಸರ ದೌರ್ಜನ್ಯ ಖಂಡಿಸಿ ಸಾರ್ವಜನಿಕರು ಇಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ನೀರು ಬಿಡುವಂತೆ ಗ್ರಾಮಸ್ಥರು ಕೇಳಿದ್ದಕ್ಕೆ ವಾಟರ್ ಮ್ಯಾನ್ ಜಗಳ ಶುರುಮಾಡಿದ್ದಾನೆ. ಇದನ್ನು ಸೇಡಾಗಿ ಇಟ್ಟುಕೊಂಡು, ನಿನ್ನೆ ಗ್ರಾಮದ 6 ಜನರನ್ನು ಪೊಲೀಸ್ ಠಾಣೆಗೆ ಕರೆತಂದು ಮಂಚೇನಹಳ್ಳಿ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಈ ವಿಷಯ ಊರಿನ ಜನರಿಗೆ ತಿಳಿಯುತ್ತಿದ್ದಂತೆ ಜನರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ, ರೌಡಿ ವಾಟರ್ ಮ್ಯಾನ್ನನ್ನು ಕೆಲಸದಿಂದ ತೆಗೆದುಹಾಕಬೇಕೆಂದು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರ ದೂರು ಸ್ವೀಕರಿಸಿರುವ ಪಿಡಿಒ ಬಸವರಾಜ್ ಸಿಇಒಗೆ ರವಾನೆ ಮಾಡುವುದಾಗಿ ಭರವಸೆ ನೀಡಿದರು. ಇನ್ನು ಹಲ್ಲೆಗೊಳಗಾದ ಆರು ಜನರನ್ನು ಗೌರಿಬಿದನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.