ನವದೆಹಲಿ, ಆ.20 : ಉತ್ತರ ಭಾರತದ ಆರು ರಾಜ್ಯಗಳಲ್ಲಿ ಭೂ ಕುಸಿತಕ್ಕೆ ಹಳ್ಳಿಗಳು ತತ್ತರಿಸಿ ಹೋಗಿವೆ. ಪ್ರವಾಹದ ಅಬ್ಬರಕ್ಕೆ ರಸ್ತೆಗಳು ಹಾಗೂ ನೂರಾರು ಮನೆಗಳು ಕೊಚ್ಚಿಕೊಂಡು ಹೋಗಿದ್ದು ಲಕ್ಷಾಂತರ ಜನರ ಬದುಕು ದುರ್ಬರವಾಗಿದೆ. ಬೆಳೆದು ನಿಂತ ಕೋಟ್ಯಂತರ ರೂ. ಮೌಲ್ಯದ ಪೈರು ನಾಶಗೊಂಡಿದೆ.
ಭೂ ಸೇನೆ, ಭಾರತೀಯ ವಾಯುಪಡೆ ಹಾಗೂ ಎನ್ಡಿಆರ್ಎಫ್ ತಂಡಗಳು ಸಮರೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. ಮಧ್ಯೆ ಗುಜರಾತಿನ ಕಛ್ನಲ್ಲಿ ರಿಕ್ಟರ್ ಮಾಪಕದ 4.2 ತೀವ್ರತೆಯ ಭೂಕಂಪ ಸಂಭವಿಸಿದೆ.
ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಉತ್ತರ ಭಾರತ ಅಕ್ಷರಶಃ ನಲುಗಿದೆ. ಗಂಗಾ, ಯಮುನಾ, ಸಟ್ಲೇಜ್ ಸೇರಿ ಅನೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಪಂಜಾಬ್, ಹರಿಯಾಣ ಮತ್ತು ದಿಲ್ಲಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.