ಬೆಂಗಳೂರು, ಜು. 31 : ಅಧಿಕಾರಕ್ಕೆ ಬಂದ 24 ಗಂಟೆಗೊಳಗಾಗಿ ಟಿಪ್ಪು ಜಯಂತಿ ರದ್ದುಪಡಿಸುವುದಾಗಿ ಯಡಿಯೂರಪ್ಪ ಹಿಂದೆ ಭರವಸೆ ನೀಡಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿ ವೇಳೆ ತಂದಿದ್ದ, ಮೈಸೂರು ಹುಲಿ ಟಿಪ್ಪು ಜಯಂತಿಗೆ ಹಾಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇತಿಶ್ರೀ ಹಾಡಿದೆ.
ಟಿಪ್ಪು ಜಯಂತಿ ರದ್ದು ಸಂಬಂಧ ಬಿಜೆಪಿ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಲೇ ಇತ್ತು. ಹೀಗಾಗಿ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ತಕ್ಷಣದಿಂದಲೇ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ, ಬಹುಮತ ಪಡೆದ 24 ಗಂಟೆಗೊಳಗಾಗಿ ಈ ಆದೇಶ ಹೊರಬಿದ್ದಿದೆ. ಇದರ ಜತೆಗೆ, ಸೋಮವಾರವಷ್ಟೇ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಸೇರಿ ಹಲವು ಶಾಸಕರು ಟಿಪ್ಪು ಜಯಂತಿ ರದ್ದುಗೊಳಿಸುವ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಕೊಡಗು ಜಿಲ್ಲೆಯ ಸಾಮರಸ್ಯಕ್ಕೆ ಟಿಪ್ಪು ಜಯಂತಿ ಮಾರಕವಾಗಿದ್ದು, ಅದನ್ನು ಮುಂದುವರೆಸಕೂಡದು ಎಂದು ಅವರು ಮನವಿ ಮಾಡಿದ್ದರು. ಹೀಗಾಗಿ ಮಂಗಳವಾರ ಸಂಪುಟ ಸಭೆಯಲ್ಲಿ ಟಿಪ್ಪು ಜಯಂತಿ ರದ್ದುಗೊಳಿಸುವ ತೀರ್ಮಾನವನ್ನು ಸಿಎಂ ಕೈಗೊಂಡರು. ಈ ಪ್ರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ಆಚರಿಸುತ್ತಿರುವ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.