ತುಷಾರ್ ಗಿರಿ ನಾಥ್ ಅವರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ನೀಡಿ ಪರಿಶೀಲನೆ

ತುಷಾರ್ ಗಿರಿ ನಾಥ್ ಅವರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ನೀಡಿ ಪರಿಶೀಲನೆ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಇಂದು ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ 3 ಲೊಕಸಭಾ ಕ್ಷೇತ್ರ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿರುವ ಮಸ್ಟರಿಂಗ್ ಕೇಂದ್ರಗಳಿಗೆ ಎಲ್ಲಾ ಮತಗಟ್ಟೆ ಅಧಿಕಾರಿಗಳು ಬಂದು ಮತಗಟ್ಟೆಗಳಿಗೆ ಅಗತ್ಯವಿರುವ ಇವಿಎಂ, ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್, ವಿವಿ ಪ್ಯಾಟ್ ಸೇರಿದಂತೆ ಎಲ್ಲಾ ಮತಗಟ್ಟೆ ಸಾಮಗ್ರಿಗಳನ್ನು ತೆಗೆದುಕೊಂಡು ಬಿ.ಎಂ.ಟಿ.ಸಿ, ಕೆ.ಎಸ್‌.ಆರ್.ಟಿ.ಸಿ, ಇತರೆ ವಾಹನಗಳ ಮೂಲಕ ಮತಗಟ್ಟೆಗಳಿಗೆ ಪೊಲೀಸ್ ಬಂದೋಬಸ್ತ್ ಮೂಲಕ ತೆರಳಲಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲೂ ವಸತಿ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ‌‌ ಎಂದು ತಿಳಿಸಿದರು.

ನಾಳೆ ಏಪ್ರಿಲ್ 26ರಂದು ಬೆಳಗ್ಗೆ 7.00 ರಿಂದ ಸಂಜೆ 6.00 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅದಕ್ಕಿಂತ ಮುಂಚಿತವಾಗಿ ಬೆಳಗ್ಗೆ 5.30ಕ್ಕೆ ಅಣುಕು ಮತದಾನ ಪ್ರಾರಂಭವಾಗಲಿದ್ದು, 7.00 ಗಂಟೆಯೊಳಗಾಗಿ ಪೂರ್ಣಗೊಳ್ಳಲಿದೆ. ಮತಗಟ್ಟೆಗಳಲ್ಲಿ ಮತದಾರರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಅಣುಕು ಮತದಾನದ ವೇಳೆ ಇವಿಎಂ ನಲ್ಲಿ ಲೋಪದೋಷಗಳು ಕಂಡುಬಂದರೆ ಸೆಕ್ಟರ್ ಅಧಿಕಾರಿ ಮೂಲಕ ಕನಿಷ್ಠ 10 ಮತಗಟ್ಟೆಗಳಿಗೆ ನಿಯೋಜನೆ ಮಾಡಿರುವಂತಹ ಮಾರ್ಗ ಅಧಿಕಾರಿಯು ಪರ್ಯಾಯ ವ್ಯವಸ್ಥೆ ಮಾಡಲಿದ್ದಾರೆ.

ನಗರದ 28 ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆ ಅಧಿಕಾರಿಗಳು, ಇವಿಎಂ, ಸಿಯು, ವಿವಿ ಪ್ಯಾಟ್, ಮತದಾನದ ದಿನ ಅಗತ್ಯವಿರುವ ಚೆಕ್ ಲಿಸ್ಟ್ ಪ್ರಕಾರ ಎಲ್ಲಾ ರೀತಿಯ ಸಾಮಗ್ರಿಗಳು, ಮತಗಟ್ಟೆಗಳಲ್ಲಿ ರಾತ್ರಿ ಉಳಿಯಲು‌ ಮತಗಟ್ಟೆ ಅಧಿಕಾರಿಗಳಿಗೆ ಬೇಕಾದಂತಹ ವ್ಯವಸ್ಥೆ ಮಾಡಲಾಗಿದೆ.

ಭೇಟಿ ನೀಡಿದ ಮಸ್ಟರಿಂಗ್ ಕೇಂದ್ರಗಳ ವಿವರ:

  1. ಶೇಷಾದ್ರಿಪುರಂ ಕಾಲೇಜು, ಯಲಹಂಕ.
  2. ಬಿಇಎಲ್ ಹೈ ಸ್ಕೂಲ್, ಬ್ಯಾಟರಾಯನಪುರ.
  3. ಕ್ರೈಸ್ಟ್ ಯೂನಿವರ್ಸಿಟಿ, ದಾಸರಹಳ್ಳಿ.

ಪರಿಶೀಲನೆಯ ವೇಳೆ ವಲಯ ಜಂಟಿ ಆಯುಕ್ತರುಗಳಾದ ಮೊಹ್ಮದ್ ನಯೀಮ್ ಮೊಮಿನ್, ಬಾಲಶೇಖರ್, ಸಹಾಯಕ ಚುನಾವಣಾಧಿಕಾರಿಗಳಾದ ಸುರೇಶ್, ಪ್ರಮೋದ್ ಪಾಟೀಲ್, ಬಾಲಪ್ಪ ಹಂದಿಗುಂದ, ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos