ಮಂಗಳೂರು, ಏ. 25, ನ್ಯೂಸ್ ಎಕ್ಸ್ ಪ್ರೆಸ್: ನಗರದ ಸೈಂಟ್ ಆಗ್ನೆಸ್ ಪದವಿಪೂರ್ವ ಕಾಲೇಜಿನಲ್ಲಿ ಬುರ್ಖಾ ಧರಿಸಿದ ವಿದ್ಯಾರ್ಥಿನಿಗೆ ಪ್ರಾಂಶುಪಾಲರು ಕಾಲೇಜ್ ಗೆ ಪ್ರವೇಶ ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದೆ.
ಪ್ರಥಮ ಪಿಯು ಪರೀಕ್ಷೆಯಲ್ಲಿ ಪಾಸಾಗಿರುವ ವಿದ್ಯಾರ್ಥಿನಿಯೊಬ್ಬರು ಬುರ್ಖಾ ಧರಿಸಿ ಬಂದಿದಕ್ಕೆ ಆಕೆಗೆ ದ್ವೀತಿಯ ಪಿಯುಸಿಗೆ ಪ್ರವೇಶ ನೀಡಿಲ್ಲ ಎನ್ನಲಾಗಿದೆ. ನೀವು ಬುರ್ಖಾ ಧರಿಸಿ ಕಾಲೇಜಿಗೆ ಬರೋದಿಲ್ಲ ಅಂತ ಹೇಳಿದರೆ ಮಾತ್ರ ನಾವು ದ್ವೀತಿಯ ಪಿಯುಸಿಗೆ ಪ್ರವೇಶ ನೀಡುತ್ತೇವೆ ಅಂತ ಹೇಳಿದ್ದಾರೆ ಎನ್ನಲಾಗಿದೆ.
ಕೊನೆಗೆ ಪೋಷಕರು ದಾಖಲಾತಿ ನಿರಾಕರಣೆಗೆ ಲಿಖಿತ ರೂಪದಲ್ಲಿ ಕಾರಣ ನೀಡಿ ಎಂದು ಕೇಳಿಕೊಂಡರೂ ಕೂಡ ಸ್ಪಂದಿಸದೆ ಟಿಸಿ ಬರೆದು ಕೊಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನೊಂದ ವಿದ್ಯಾರ್ಥಿನಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ತಾನು ತನ್ನ ಶಿಕ್ಷಣವನ್ನು ಅರ್ಧದಲ್ಲಿ ಮೊಟಕುಗೊಳಿಸುವಂತಾಗಿದ್ದು, ಈ ಬಗ್ಗೆ ಸೂಕ್ತ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಈ ಕಾಲೇಜಿನ ಪದವಿ ವಿಭಾಗದಲ್ಲಿ ವಿದ್ಯಾರ್ಥಿನಿಯರಿಗೆ ಬುರ್ಖಾ ನಿಷೇಧಿಸಲಾಗಿತ್ತು. ಆ ಸಂದರ್ಭದಲ್ಲಿ ಕಾಲೇಜಿನ ನಿಯಮದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.