ಬೆಂಗಳೂರು: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು 169 ರನ್ಗಳ ಅಂತರದಿಂದ ಸೋಲಿಸಿದ ಮುಂಬೈ ತಂಡವು ದಾಖಲೆಯ 42ನೇ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ.
ದಾಖಲೆಯ ರಣಜಿ ಟ್ರೋಫಿಗೆ ಮುಂಬೈ ತಂಡ ಮುತ್ತಿಕ್ಕಿದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿದರ್ಭ ತಂಡವನ್ನು ಮಣಿಸಿ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ದಾಖಲೆಯ 42ನೇ ಟ್ರೋಫಿಯನ್ನು ಎತ್ತಿಹಿಡಿದಿದೆ. ಫೈನಲ್ನಲ್ಲಿ 169 ರನ್ಗಳಿಂದ ಸೋಲನುಭವಿಸಿದ ವಿದರ್ಭ, 3ನೇ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದು ರನ್ನರ್ಅಪ್ಗೆ ತೃಪ್ತಿಯಾಗಿದೆ.
538 ರನ್ಗಳ ದೊಡ್ಡ ಮೊತ್ತದ ಗುರಿ ಪಡೆದಿದ್ದ ವಿದರ್ಭ, ಕರುಣ್ ನಾಯರ್ (74), ಅಕ್ಷಯ್ ವಾಡ್ಕರ್ (102), ಹರ್ಷ ದುಬೆ ಹೋರಾಟದ ನಡುವೆಯೂ ಚಾಂಪಿಯನ್ ಆಗಲು ಸಾಧ್ಯವಾಗಲಿಲ್ಲ. ಈ ಹಿಂದೆ ಫೈನಲ್ಗೇರಿದ್ದ ಎರಡೂ ಬಾರಿಯೂ ಟ್ರೋಫಿ ಗೆದ್ದಿದ್ದ ವಿದರ್ಭ ಈ ಬಾರಿ ರನ್ನರ್ಅಪ್ನೊಂದಿಗೆ ಟೂರ್ನಿಯನ್ನು ಮುಗಿಸಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಶಾರ್ದೂಲ್ ಠಾಕೂರ್ (75) ಅವರ ಭರ್ಜರಿ ಅರ್ಧಶತಕದ ನೆರವಿನಿಂದ 64.3 ಓವರ್ಗಳಲ್ಲಿ 224 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ವಿದರ್ಭ 105 ರನ್ಗಳ ಅಲ್ಪಮೊತ್ತಕ್ಕೆ ಆಲೌಟ್ ಆಯಿತು.’
ಇದರೊಂದಿಗೆ 119 ರನ್ಗಳ ಮುನ್ನಡೆ ಪಡೆದ ಮುಂಬೈ, ಎರಡನೇ ಇನ್ನಿಂಗ್ಸ್ನಲ್ಲೂ ಭರ್ಜರಿ ಪ್ರದರ್ಶನ ನೀಡಿತು. 2ನೇ ಇನ್ನಿಂಗ್ಸ್ನಲ್ಲಿ 130.2 ಓವರ್ಗಳಲ್ಲಿ 418 ರನ್ ಕಲೆ ಹಾಕಿತು.
ಮುನ್ನಡೆ ಪಡೆದಿದ್ದ 119 ರನ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಕಲೆ ಹಾಕಿದ್ದ 418 ರನ್ ಸೇರಿ ಮುಂಬೈ, ವಿದರ್ಭ ತಂಡಕ್ಕೆ 537 ರನ್ಗಳ ಗುರಿ ನೀಡಿತು. ಈ ಗುರಿ ಹಿಂಬಾಲಿಸಿದ ವಿದರ್ಭ, 134.3 ಓವರ್ಗಳಲ್ಲಿ 368 ರನ್ ಗಳಿಸಿ 169 ರನ್ಗಳಿಂದ ಸೋಲನುಭವಿಸಿತು. ಇದರೊಂದಿಗೆ ಮುಂಬೈ ಚಾಂಪಿಯನ್ ಪಟ್ಟ ಅಲಂಕರಿಸಿ ಸಂಭ್ರಮಿಸಿತು.