ಬೆಂಗಳೂರು, ಮಾ, 21, ನ್ಯೂಸ್ ಎಕ್ಸ್ ಪ್ರೆಸ್: ತುಮಕೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದರಾಗಿರುವ ಕಾಂಗ್ರೆಸ್ನ ಎಸ್ ಪಿ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ತುಮಕೂರು ಜೆಡಿಎಸ್ ಪಾಲಾಗಿದೆ. ಹಾಗಾಗಿ ಹಾಲಿ ಕಾಂಗ್ರೆಸ್ ಸಂಸದರಾಗಿರುವ ಮುದ್ದಹನುಮೇಗೌಡ ಅವರಿಗೆ ಕ್ಷೇತ್ರವು ಕೈತಪ್ಪಿದ್ದು, ಮುಂದಿನ ನಿರ್ಧಾರದ ಕುರಿತಾಗಿ ನಾಳೆ ಬೆಂಬಲಿಗರ ಸಭೆ ಕರೆದಿದ್ದಾರೆ. ಬಂಡಾಯವಾಗಿ ಸ್ಪರ್ಧಿಸಲು ಮುದ್ದಹನುಮೇಗೌಡರಿಗೆ ಒತ್ತಾಯ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನಾಳೆ ಮುದ್ದಹನುಮೇಗೌಡ ಅವರ ನಿವಾಸದಲ್ಲಿ ಕಾರ್ಯಕರ್ತರು ಸಭೆ ಸೇರಲಿದ್ದಾರೆ. ಕೊನೆ ಕ್ಷಣದವರೆಗೂ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರನ್ನೊಳಗೊಂಡಂತೆ ಮೈತ್ರಿ ಸರ್ಕಾರದಲ್ಲಿ ತುಮಕೂರಿನಿಂದ ಟಿಕೆಟ್ಗಾಗಿ ಲಾಬಿ ನಡೆಸಿದ್ದರು. ಆದರೆ, ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಸಭೆ ಸೇರಿ ಗೌಡರಿಗೆ ಬಂಡಾಯವಾಗಿ ಸ್ಪರ್ಧಿಸಲು ಒತ್ತಾಯಿಸಲಾಗಿದೆ ಎಂದು ಹೇಳಲಾಗಿದೆ.