ಬೆಂಗಳೂರು, ನ. 21: ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕು ಸಾಕಷ್ಟು ಹೆಸರು ಮಾಡಿದ ಕ್ಷೇತ್ರ. ಅದರಲ್ಲು ಈ ಹಿಂದೆ ರೌಡಿಸಂನಲ್ಲೂ ಸಾಕಷ್ಟು ಸದ್ದು ಮಾಡಿದೆ. “ಬೆಂಗಳೂರು ಗ್ರಾಮಾಂತರ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಗೆಲುವಿಗಾಗಿ ಎಂಟಿಬಿ ನಾಗರಾಜ್ ಎಲ್ಲ ರೀತಿಯ ತಂತ್ರ-ಕುತಂತ್ರ ಹೆಣೆಯುತ್ತಿದ್ದಾರೆ. ಈಗಾಗಲೇ ಎಂಟಿಬಿ ನಾಗರಾಜ್ ಅವರೇ ಹೇಳಿದಂತೆ ಜನರಿಗೆ ಹಣದ ಆಮೀಷವೊಡ್ಡುವ ಮೂಲಕ ಮತ ಪಡೆಯಲು ಮುಂದಾಗಿದ್ದಾರೆ” ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಗಂಭೀರ ಆರೋಪ ಎಸಗಿದ್ದಾರೆ.
ಹೊಸಕೋಟೆಯ ಸ್ವಾಭಿಮಾನಿ ಪಕ್ಷದ ಕಚೇರಿಯಲ್ಲಿ ಮಾತಾಡಿದ ಶರತ್ ಬಚ್ಚೇಗೌಡ, ತಮ್ಮ ತಂದೆ ಜನರಿಗೆ ನೀಡಿದ ಕೊಡುಗೆಗಳ ಬಗ್ಗೆ ಕೊಂಡಾಡಿದರು. ಬಚ್ಚೇಗೌಡರು ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ನೇರ ನುಡಿಯಿಂದ ಬದುಕಿದವರು. ಇಲ್ಲಿಯವರೆಗೂ ನನ್ನ ತಂದೆ ಯಾರಿಗೂ ಮೋಸ ಮಾಡಿದ್ದಾಗಲಿ, ಜನರ ದಾರಿ ತಪ್ಪಿಸಿದ್ದಾಗಲಿ ಇಲ್ಲವೇ ಇಲ್ಲ. ನಮ್ಮ ಜೊತೆ ಯಾರೇ ಬಂದು ಪ್ರಚಾರ ಮಾಡಿದರೂ ಸ್ವಾಗತಿಸುತ್ತೇವೆ ಎಂದರು.
ಇನ್ನು ರಾಜ್ಯದ ವಿವಿಧ ಭಾಗಗಳಿಂದ ಹೊಸಕೋಟೆಗೆ ಬಂದು ಜನ ನನ್ನ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಯಾರ ಬಗ್ಗೆಯೂ ಮಾತನಾಡುವುದು ಬೇಡ. ಈ ಉಪಚುನಾವಣೆಯಲ್ಲಿ ಮತದಾರರು ಕೈಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ. ಇನ್ನೇನು ಚುನಾವಣೆ ದಿನವೂ ಸಮೀಪಿಸುತ್ತಿದೆ. ಹಾಗಾಗಿ ನಾವು ಬೇಗ ಜನರ ಬಳಿ ಹೋಗುವ ಕೆಲಸ ಮಾಡಬೇಕಿದೆ ಎಂದು ಕಾರ್ಯಕರ್ತರಿಗೆ ಶರತ್ ಬಚ್ಚೇಗೌಡ ಕರೆ ನೀಡಿದರು.
ಈ ಹಿಂದೆಯೇ ಹೊಸಕೋಟೆ ಉಪಚುನಾವಣಾ ಸಮರದ ಬಂಡಾಯದ ಬಿಸಿ ಬಿಜೆಪಿಗೆ ತಟ್ಟಿದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಬಿ.ಫಾರಂ? ನೀಡಬೇಕು ಎಂಬ ಕಗ್ಗಂಟು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಎದುರಾಗಿತ್ತು. ಬಿಜೆಪಿ ಆಕಾಂಕ್ಷಿ ಶರತ್ ಬಚ್ಚೇಗೌಡ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸುವುದಾಗಿ ಎಚ್ಚರಿಕೆ ನೀಡಿದ್ದರು.