ಲಕ್ನೋ, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ರಾಮಮಂದಿರ ವಿಚಾರವಾಗಿ ಸದಾ ಪ್ರಧಾನಿ ಮೋದಿ ವಿರುದ್ಧ ಹರಿಹಾಯುತ್ತಿರುವ ವಿಶ್ವ ಹಿಂದೂ ಪರಿಷತ್ನ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಈಗ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಪ್ರತಿಸ್ಪರ್ಧಿಯಾಗಿ ವಾರಣಾಸಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದುಸ್ತಾನ್ ನಿರ್ಮಾಣ್ ದಳ ಸಂಸ್ಥಾಪಕರಾಗಿರುವ ಪ್ರವೀಣ್ ತೊಗಾಡಿಯಾ ಅವರು ನಿನ್ನೆ ಸುದ್ದಿಗೋಷ್ಠಿಯಲ್ಲಿ ತಮ್ಮ ಪಕ್ಷದ 26 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇವರೆಲ್ಲರೂ ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲಿದ್ದಾರೆ.
ಬಳಿಕ ಮಾತನಾಡಿದ ಅವರು, “ಅಧಿಕಾರಕ್ಕೇರುವ ಮುನ್ನ ಮೋದಿಯವರು ಹಲವು ಭರವಸೆಗಳನ್ನು ನೀಡಿದ್ದರು. ಆದರೆ ಇವುಗಳಲ್ಲಿ ಯಾವೊಂದನ್ನೂ ಕೂಡ ಮೋದಿ ಅಥವಾ ಬಿಜೆಪಿಯಾಗಲೀ ಈಡೇರಿಸಿಲ್ಲ ಚುನಾವಣಾ ಬಂದಾಗ ಮಾತ್ರ ಬಿಜೆಪಿಗೆ ಅಯೋಧ್ಯೆಯ ನೆನಪಾಗುತ್ತದೆ” ಎಂದು ಕಿಡಿಕಾರಿದ್ದಾರೆ.
“ನಾನು ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಬೇಕೆನ್ನುವ ಒತ್ತಡ ಪಕ್ಷದ ಕಾರ್ಯಕರ್ತರಿಂದ ಹೆಚ್ಚಾಗುತ್ತಿವೆ. ಈ ಬಗ್ಗೆ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿದ ನಂತರವೇ ಅಂತಿಮ ತೀರ್ಮಾನಕ್ಕೆ ಬರುವುದಾಗಿ”ಅವರು ತಿಳಿಸಿದ್ದಾರೆ.