ಹುಬ್ಬಳ್ಳಿ, ಮಾ.9, ನ್ಯೂಸ್ ಎಕ್ಸ್ ಪ್ರೆಸ್: ಮೋದಿ ಅವರು ಕೇವಲ ಚುನಾವಣಾ ಪ್ರಚಾರ ಮಾಡಿದ್ದು, ಪ್ರಚಾರದಲ್ಲಿ ಕೆಲಸದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಮೋದಿಯವರು ಯಾವಾಗಲೂ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಕೇವಲ ಬೆಂಗಳೂರು ಯೋಜನೆ ಹಾಗೂ ಹುಬ್ಬಳ್ಳಿ ಧಾರವಾಡದ ಒಂದು ಯೋಜನೆ ಬಗ್ಗೆ ಮಾತನಾಡಿದ್ದು ಬಿಟ್ರೆ ಅಲ್ಲಿ ಜನರಿಗೆ ಏನು ಕೊಟ್ರು ಎಂಬುದನ್ನು ಮಾತನಾಡಲೇ ಇಲ್ಲ ಎಂದು ಹೇಳಿದ್ದಾರೆ.
5 ವರ್ಷದಲ್ಲಿ ಏನು ಕೊಟ್ಡಿರಿ ಎಂದು ಕೇಳುತ್ತೇವೆ. ನೌಕರಿ ಕೊಡಲಿಲ್ಲ, ಅವರ ವರದಿ ಪ್ರಕಾರವೇ 3 ಲಕ್ಷ ನೌಕರಿ ಕಡಿಮೆಯಾಗಿವೆ. 5 ವರ್ಷದಲ್ಲಿ 27 ಲಕ್ಷ ನೌಕರಿ ಕೊಡಲಾಗಿದೆ. 2014ರ ಚುನಾವಣೆಯಲ್ಲಿ ರಾಮ ದೇವರ ಮೇಲೆ ನಂಬಿಕೆ ಇಟ್ಟು ಕಪ್ಪು ಹಣ ತರುತ್ತೇವೆ ಎಂದಿದ್ದರು ಆದರೆ ಇಲ್ಲಿಯವರೆಗೂ ಅದು ಸಾಧ್ಯವಾಗಿಲ್ಲ. ಕಪ್ಪು ಹಣದ ಬಗ್ಗೆ ಮಾತನಾಡದೇ ಮೌನವಾಗಿದ್ದಾರೆ ಎಂದು ಟೀಕಿಸಿದರು.
ಮೋದಿಗೆ ರೈತರ ಆತ್ಮಹತ್ಯೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಬದಲಾಗಿ ಇನ್ಶುರೆನ್ಸ್ ಕಂಪನಿಗಳಿಗೆ ಲಾಭ ಮಾಡಿದಾರೆ. ಜನರ ಬಳಿ ಇದನ್ನು ಇಡುತ್ತೇವೆ. ನನ್ನ ಮೇಲಿನ ಪ್ರೀತಿಗೆ ಅವರು ನನ್ನ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ್ದಾರಷ್ಟೇ ಎಂದು ವ್ಯಂಗವಾಡಿದರು.
ದೇಶದಲ್ಲಿ ಸರಹದ್ದು ಮೇಲೆ ದಾಳಿ ಮಾಡಿದರು ಕೂಡಾ ನಾವು ಎಲ್ಲರೂ ಬೆಂಬಲ ನೀಡಿದ್ದೇವೆ. ಇದರಲ್ಲಿ ರಾಜಕೀಯ ಸರಿಯಲ್ಲ, ಯುಪಿಎ ಕಾಲದಲ್ಲಿ ಕೂಡಾ ಸರ್ಜಿಕಲ್ ದಾಳಿ ನಡೆದಿವೆ. ಸೈನಿಕರ ಹೆಣದ ಮೇಲೆ ರಾಜಕಿಯ ಸರಿಯಲ್ಲ, ಎಲ್ಲರೂ ಒಗ್ಗಟ್ಟಾಗಿ ನಡೆಯಬೇಕು ಎಂದು ಮೋದಿಗೆ ಟಾಂಗ್ ನೀಡಿದರು.