ಹಾಸನ, ಮಾ.20, ನ್ಯೂಸ್ ಎಕ್ಸ್ ಪ್ರೆಸ್: ಯಾವುದೇ ಕಾರಣಕ್ಕೂ ಮೋದಿ ಅಧಿಕಾರಕ್ಕೆ ಬರುವುದಿಲ್ಲ. ಬೇಕಾದರೆ ಬರೆದಿಟ್ಟುಕೊಳ್ಳಿ ಎಂದು ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ.
ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಮೋದಿ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಅಧಿಕಾರಕ್ಕೆ ಬಂದಮೇಲೆ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟರು? ಕಾಂಗ್ರೆಸ್ ಜೆಡಿಎಸ್ ಸೇರಿ ರಾಜ್ಯದಲ್ಲಿ 25 ಸ್ಥಾನ ಗೆಲ್ಲುತ್ತೇವೆ. ಖಾತೆಗೆ ಆರು ಸಾವಿರ ಹಾಕುತ್ತೇವೆ ಎಂದು ಹೇಳಿದರು. ಆದರೆ, ಆರು ಮಂದಿಗೆ ಆರು ಸಾವಿರ ಹಾಕಿದ್ದಾರೆ ಎಂದು ಕಿಡಿಕಾರಿದರು.
ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಹಾಸನ ತಾಲೂಕಿನಲ್ಲಿ ಬಿಜೆಪಿ ಬಾವುಟ ಕಿತ್ತು ಹಾಕಿ ಜೆಡಿಎಸ್ ಬಾವುಟ ಹಾರಿಸಬೇಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಕೇವಲ ಲೋಕಸಭಾ ಚುನಾವಣೆ ಮಾತ್ರವಲ್ಲ ಮುಂದಿನ ವಿಧಾನಸಭೆ ಚುನಾವಣೆಗೆ ಈಗಲೇ ಸಜ್ಜಾಗುತ್ತಿದ್ದೇವೆ. ಹಾಸನವನ್ನು ಜೆಡಿಎಸ್ ಭದ್ರಕೋಟೆ ಮಾಡಬೇಕು. ಯಾವುದೇ ಕಾರ್ಯಕರ್ತರು ಕಷ್ಟ ಬಂದರೆ ಸ್ಪಂದಿಸುವ ಶಕ್ತಿಯನ್ನು ನನ್ನ ತಂದೆ ತಾಯಿ ನೀಡಿದ್ದಾರೆ ಎಂದು ಹೇಳಿದರು.
ಟೀಕೆ ನಮ್ಮ ಸಿದ್ಧಾಂತ ಅಲ್ಲ, ನಾನು ಯಾರನ್ನೂ ಟೀಕಿಸಲ್ಲ. ಅಭಿವೃದ್ಧಿ ನಮ್ಮ ಸಿದ್ಧಾಂತ. ಅಭಿವೃದ್ಧಿ ಹೆಸರಲ್ಲಿ ಮತಕೇಳೋಣ. ಬಹಳಷ್ಟು ಮನೆಗೆ ದೇವೇಗೌಡರು ದೀಪ ಬೆಳಗಿಸಿದ್ದಾರೆ. ದೇವೇಗೌಡರು ನಮಗೆ ಅವರ ಸ್ಥಾನವನ್ನು ಧಾರೆ ಎರೆದಿದ್ದಾರೆ. ಹಿರಿಯ ಕಾರ್ಯಕರ್ತರು ಮತ್ತು ಹಿರಿಯರ ಸಲಹೆ ಪಡೆದು ಕೆಲಸ ಮಾಡುತ್ತೇನೆ ಎಂದು ಪ್ರಜ್ವಲ್ ತಿಳಿಸಿದರು.