ಕಲಬುರಗಿ, ಮಾ.6, ನ್ಯೂಸ್ ಎಕ್ಸ್ ಪ್ರೆಸ್: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ವಿರುದ್ಧ ಸಿಡಿದೆದ್ದು, ಕೈ ತೊರೆದಿರುವ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆಗೆ ಇಂದು ಕಲಬುರಗಿಯಲ್ಲಿ ವೇದಿಕೆ ಸಜ್ಜಾಗಿದೆ.
ಈ ನಡುವೆ ಇಂದು ನಡೆಯಲಿರುವ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಉಮೇಶ್ ಜಾಧವ್ ಪ್ರಧಾನಿ ಸಮ್ಮುಖದಲ್ಲೇ ಬಿಜೆಪಿ ಸೇರಲಿದ್ದು, ಚುನಾವಣೆಯಲ್ಲಿ ಅವರನ್ನೇ ಖರ್ಗೆ ಎದುರು ಘೋಷಣೆ ಮಾಡಲಾಗುವುದು ಎನ್ನಲಾಗಿದೆ. ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಖರ್ಗೆ ವಿರುದ್ಧ ಹೆಪ್ಪುಗಟ್ಟಿರುವ ವಿರೋಧಿ ಅಲೆಗಳನ್ನು ಒಟ್ಟುಗೂಡಿಸಿ ಬಿಜೆಪಿ ಹೋರಾಟಕ್ಕಿಳಿದಿದೆ. ಈ ಬಾರಿ ಹೇಗಾದರೂ ಮಾಡಿ ಕಲಬುರಗಿಯನ್ನು ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಹೊರಟಿರುವ ಬಿಜೆಪಿಗೆ ಕಾಂಗ್ರೆಸ್ನ ಅತೃಪ್ತರೆಲ್ಲ ಬೆಂಬಲಕ್ಕೆ ನಿಂತಿರುವುದು ವಿಶೇಷ. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರದಿಂದಲೇ ಮೋದಿ ರಾಜ್ಯ ಪ್ರವಾಸ ಆರಂಭಿಸುತ್ತಿರುವುದು ಇನ್ನೊಂದು ವಿಶೇಷವಾಗಿದೆ.