ಮಂಡ್ಯ, ಮೇ. 23, ನ್ಯೂಸ್ ಎಕ್ಸ್ ಪ್ರೆಸ್: ಕರ್ನಾಟಕದಲ್ಲಿ ಅತಿ ಹೆಚ್ಚು ಒಕ್ಕಲಿಗರನ್ನು ಹೊಂದಿರುವ ಮಂಡ್ಯ ಕ್ಷೇತ್ರ ಸದ್ಯ ಜೆಡಿಎಸ್ ಪಕ್ಷದ ಭದ್ರಕೋಟೆ. 8 ಗಂಟೆಗೆ ಅಂಚೆ ಮತ ಎಣಿಕೆ ಆರಂಭವಾಗಿದ್ದು, ಮೊದಲಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಮುನ್ನಡೆ ಸಿಕ್ಕಿದೆ. ಆ ನಂತರದಲ್ಲಿ ನಿಖಿಲ್ ಕುಮಾರಸ್ವಾಮಿ ಕೇವಲ 12 ಮತಗಳಲ್ಲಿ ಮುನ್ನಡೆ ಕಂಡು ಬಂದ್ರೂ ಪ್ರಭಲ ಪೈಪೋಟಿ ಏರ್ಪಟ್ಟಿದೆ.
ನಾಡದೇವತೆ ದರ್ಶನ ಪಡೆದ ನಿಖಿಲ್
ಮಂಡ್ಯ ಗೆಲುವಿಗಾಗಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಚಾಮುಂಡಿದೇವಿಗೆ ಮೊರೆಹೋದರು. ಇಂದು ಬೆಳಗಿನ ಜಾವ 5ಕ್ಕೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ನಿಖಿಲ್ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದರು. ವಿಶೇಷ ಪೂಜೆಯನ್ನು ಇದೇ ವೇಳೆ ಸಲ್ಲಿಸಿದರು. ನಿಖಿಲ್ ಕುಮಾರಸ್ವಾಮಿ ಜೊತೆಗೆ ಮೈಸೂರು ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಶಾಸಕ ಸುರೇಶ್ ಗೌಡ, ಎಂ.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್ ಗೌಡ, ಸಚಿವರಾದ ಸಿ.ಎಸ್. ಪುಟ್ಟರಾಜು ಪುತ್ರ ಶಿವರಾಜು, ಡಿ.ಸಿ. ತಮ್ಮಣ್ಣ ಪುತ್ರ ಸಂತೋಷ್ ಸಹ ಸಾಥ್ ನೀಡಿದರು.
ಗೆಲುವಿನ ವಿಶ್ವಾಸದಲ್ಲಿ ನಿಖಿಲ್
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಗೆಲ್ಲೋದು ನಾನೇ. ನನಗೆ ಚುನಾವಣೋತ್ತರ ಸಮೀಕ್ಷೆ ಬಗ್ಗೆ ಚಿಂತೆಯಿಲ್ಲ. ಗೆಲುವು ನಮ್ಮದೇ ಎಂದು ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದರು.
ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ, ಕೃಷ್ಣರಾಜಸಾಗರ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ನಿಖಿಲ್ ಕುಮಾರಸ್ವಾಮಿ ಅವರಿಗೆ ಎಕ್ಸಿಟ್ ಪೋಲ್ ನಿಂದ ಬಲ ಬಂದಿದ್ದರೂ ಮಹಿಳಾ ಮತದಾರರು, ಅಂಬರೀಷ್ ಮೇಲಿನ ಜನರ ಪ್ರೀತಿಯ ಶೀರಕ್ಷೆ ಸುಮಲತಾ ಅವರನ್ನು ಗೆಲ್ಲಿಸಿ ದೆಹಲಿ ತನಕ ಕರೆದೊಯ್ಯಲಿದೆ ಎನ್ನಲಾಗ್ತಿದೆ.