ಬೆಂಗಳೂರು; 2 ದಿನ ಕಾದು ನೋಡಿ ಊರು ಬಿಟ್ಟು ಹೋಗಿರುವ ಶಾಸಕರು ಮತ್ತೆ ವಾಪಸ್ ಮರಳಲಿದ್ದಾರೆ, ಎಲ್ಲವೂ ಸರಿಹೋಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮ್ಮದ್ ಹೇಳಿದ್ದಾರೆ.
ಉಪಹಾರ ಕೂಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಮುಂಬೈಗೆ ತೆರಳಿರುವುದು ಖಾಸಗಿ ಕಾರ್ಯಕ್ರಮಗಳಿಗಾಗಿ. ಯಾರೂ ಬಿಜೆಪಿಗೆ ಹೋಗುವುದಿಲ್ಲ. ಶಾಪಿಂಗ್ಗಾಗಿ, ಬೇರೆ ಬೇರೆ ಕಾರಣಕ್ಕಾಗಿ ಮುಂಬೈನಲ್ಲಿದ್ದಾರೆ. ಬಿಜೆಪಿಯವರು ನಮ್ಮವರನ್ನು ಸೆಳೆಯಲು ಪ್ರಯತ್ನಿಸುತ್ತಿರುವುದು ನಿಜ. ಆದರೆ ಅದ್ಯಾವುದೂ ಯಶಸ್ವಿಯಾಗುವುದಿಲ್ಲ. ಎರಡು ಮೂರು ದಿನ ತಾಳ್ಮೆಯಿಂದಿರಿ. ಎಲ್ಲಾ ಶಾಸಕರು ಬೆಂಗಳೂರಿಗೆ ವಾಪಸ್ ಬರುತ್ತಾರೆ. ಸರ್ಕಾರ ಸುಭದ್ರವಾಗಿದೆ. ಸರ್ಕಾರಕ್ಕೆ ಯಾವುದೇ ಅಪಾಯವೂ ಇಲ್ಲ. ಆತಂಕ ಪಡುವ ಅಗತ್ಯವೂ ಇಲ್ಲ ಎಂದು ಹೇಳಿದರು.