ಬೆಂಗಳೂರು, ಜೂ. 27: ರಾಯಚೂರು ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಬಸ್ಸನ್ನು ತಡೆದ YTPS ಕಾರ್ಮಿಕರ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದರು. ಬುಧವಾರ ರಾಯಚೂರಿನಲ್ಲಿ ಗ್ರಾಮ ವಾಸ್ತವ್ಯ ವೇಳೆ ನಡೆದ ಬೆಳವಣಿಗೆಗಳು ದೇವೇಗೌಡ್ರನ್ನು ಕೆರಳಿಸಿದ್ದು, ಪಕ್ಷದ ಸಚಿವರೊಬ್ಬರ ವಿರುದ್ಧ ಗರಂ ಆಗಿದ್ದಾರೆ.
ಫೋನ್ ಮಾಡಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ರಾಯಚೂರು ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ವಿರುದ್ಧ ಎಚ್.ಡಿ. ದೇವೇಗೌಡರು ಸಿಟ್ಟಾಗಿದ್ದಾರೆ. ಬಿಜೆಪಿ ಬಾವುಟ ಹಿಡಿದುಕೊಂಡು ಮೋದಿಗೆ ಜೈಕಾರ ಹಾಕುತ್ತಿದ್ದ ಆ ಗುಂಪಿನ ವರ್ತನೆ ಕಂಡು ಸಿಎಂ ಸಿಡಿಮಿಡಿಗೊಂಡಿದ್ದರು. ಓಟು ಮೋದಿಗೆ ಹಾಕಿ, ಸಮಸ್ಯೆ ನನ್ನ ಬಳಿ ಹೇಳ್ತೀರಾ ಎಂದು ಎಚ್ಡಿಕೆ ಪ್ರತಿಭಟನಾಕಾರರಿಗೆ ಕೇಳಿದ್ದು, ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದರು.