ಮೈಸೂರು,ಸೆ. 22 : ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬಿಜೆಪಿ ಸಚಿವ ಕೆ.ಎಸ್. ಈಶ್ವರಪ್ಪ ಜೊತೆ ಕಾಣಿಸಿಕೊಂಡಿರುವ ಜಿ.ಟಿ. ದೇವೇಗೌಡ ಮತ್ತೊಮ್ಮೆ ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಾಜಿ ಸಚಿವ ಜಿ.ಟಿ. ದೇವೇಗೌಡ ಜೆಡಿಎಸ್ ನಾಯಕರ ವಿರುದ್ಧ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡಿ ಪಕ್ಷದ ನಾಯಕರಿಗೆ ಮುಜುಗರ ಉಂಟುಮಾಡಿದ್ದರು.
ಸದಾ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡುವ ಜಿಟಿಡಿ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಪ್ರಬಲವಾಗಿ ಕೇಳಿಬಂದಿದ್ದವು. ಜೆಡಿಎಸ್ ಪಕ್ಷದ ಬಗ್ಗೆ ಎಷ್ಟೇ ಅಸಮಾಧಾನಗಳಿದ್ದರೂ ಸದ್ಯಕ್ಕೆ ಬಿಜೆಪಿ ಸೇರುವ ಕುರಿತು ನಿರ್ಧರಿಸಿಲ್ಲ ಎಂದು ಜಿ.ಟಿ. ದೇವೇಗೌಡ ಅವರೇ ಹೇಳಿಕೊಂಡಿದ್ದರು. ಇಂದು ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಲು ತೆರಳಿದ್ದ ಸಚಿವ ಕೆ.ಎಸ್. ಈಶ್ವರಪ್ಪ ವಾಪಾಸ್ ತೆರಳುವಾಗ ಮಾಜಿ ಸಚಿವ ಜಿ.ಟಿ. ದೇವೇಗೌಡ ದೇವಸ್ಥಾನಕ್ಕೆ ಬಂದಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಇಬ್ಬರೂ ನಾಯಕರು ಮುಖಾಮುಖಿಯಾಗಿದ್ದು, ಈಶ್ವರಪ್ಪ ಅವರಿಗೆ ಜಿ.ಟಿ. ದೇವೇಗೌಡ ಹೂಗುಚ್ಛ ನೀಡಿ ಮಾತನಾಡಿಸಿದ್ದಾರೆ.