ಬೆಂಗಳೂರು, ಮೇ. 8, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆ ಚುನಾವಣೆ ಕೊನೆ ಹಂತ ತಲುಪುತ್ತಿದೆ. 6ನೇ ಹಂತದ ಚುನಾವಣೆಗೆ ಪ್ರಚಾರ ಜೋರಾಗಿದೆ. ಮೇ.12ರಂದು ದೆಹಲಿ ಹಾಗೂ ಹರ್ಯಾಣ 7 ರಾಜ್ಯಗಳ 59 ಸೀಟುಗಳಿಗೆ ಮತದಾನ ನಡೆಯಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಇತ್ತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ದೆಹಲಿಯಲ್ಲಿ ರೋಡ್ ಶೋ ನಡೆಸುತ್ತಿದ್ದಾರೆ.
ಈಗಾಗಲೇ ಮತದಾನ ಮುಗಿಸಿರುವ ರಾಜ್ಯಗಳು ಫಲಿತಾಂಶವನ್ನು ಎದುರು ನೋಡುತ್ತಿವೆ. ಯಾರಿಗೆ ಗೆಲುವು, ಯಾರಿಗೆ ಸೋಲು ಎಂಬ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ.
ಮೇ 23 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಆದರೆ, ಈ ಬಾರಿ ಹಿಂದಿನ ಬಾರಿಗಿಂತ ತಡವಾಗಿ ಫಲಿತಾಂಶ ಹೊರ ಬೀಳಲಿದೆ ಎಂದು ಉಪಚುನಾವಣಾ ಆಯುಕ್ತ ಸುದೀಪ್ ಜೈನ್ ಹೇಳಿದ್ದಾರೆ.
ಈ ಬಾರಿ 4-5 ಗಂಟೆ ತಡವಾಗಿ ಫಲಿತಾಂಶ ಹೊರಬೀಳಲಿದೆ ಎಂದು ಸುದೀಪ್ ಜೈನ್ ಹೇಳಿದ್ದಾರೆ. ವಿವಿಪ್ಯಾಟ್ ಹಾಗೂ ಇವಿಎಂ ಕಾರಣದಿಂದ ಫಲಿತಾಂಶ ತಡವಾಗಿ ಬರಲಿದೆ ಎಂದು ಸುದೀಪ್ ಜೈನ್ ಹೇಳಿದ್ದಾರೆ.