ದೊಡ್ಡಬಳ್ಳಾಪುರ,ಜು. 13 : ಬೆಂಗಳೂರು ಹಿಂದೂಪುರ ಹೆದ್ದಾರಿ ಮಾರ್ಗದ ಮೇಲ್ಸೇತುವೆ ಮತ್ತೆ ಕುಸಿತ ಕಂಡಿದೆ.ನೆನ್ನೆ ಮಧ್ಯಾಹ್ನ ಮೇಲ್ಸೇತುವೆ ಒಂದು ಕಡೆ ಭಾರಿ ಕುಸಿತ ಕಂಡು ಮಣ್ಣು,ಸ್ಲಾಬ್ ಗಳು ಒಂದೊಂದೇ ಉದುರುತ್ತಿದೆ.ಇದನ್ನು ಕಂಡ ಸ್ಥಳೀಯರು ತಕ್ಷಣ ಎಚ್ಚೆತ್ತುಕೊಂಡು ಸೇತುವೆ ಗೆ ಎರಡು ಕಡೆ ಕಲ್ಲುಗಳನ್ನಿಟ್ಟು ವಾಹನ ಸಂಚಾರ ನಿಲ್ಲಿಸಿದ್ದಾರೆ. ಆದರೆ ಇದೇ ಸೇತುವೆ ಮತ್ತೊಂದು ಕಡೆ ಟೂವೇ ಮಾಡಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.ಆದರೆ ಸಂಜೆ ವೇಳೆಗೆ ಮತ್ತೊಂದು ಕಡೆ ಸಹ ಸೇತುವೆ ಬಿರುಕು ಬಿಟ್ಟಿದೆ.
ಇದರಿಂದ ಸ್ಥಳೀಯರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ಈ ಸೇತುವೆ ಉದ್ಘಾಟನೆಗೊಂಡು ಕೇವಲ ಒಂದು ವರ್ಷವಾಗಿದೆ. ಆರಂಭದಲ್ಲೇ ಸೇತುವೆ ಒಂದು ಕಡೆ ಕುಸಿತ ಕಂಡಿತ್ತು.ಅದನ್ನು ಸುದ್ದಿ ಮಾಡಲು ತೆರಳಿದ್ದ ಮಾಧ್ಯಮದವರಿಗೆ ಗುತ್ತಿಗೆದಾರರು ಧಮ್ಕಿ ಹಾಕಿದ್ದರು. ಕಳಪೆ ಕಾಮಗಾರಿಯಿಂದ ಈರೀತಿ ಕುಸಿತ ಕಂಡಿದ್ದು, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ ಗುತ್ತಿಗೆದಾರರ ಮೇಲೆ ಮೊಕದ್ದಮೆ ದಾಖಲಿಸಿ ಕ್ರಮಕೈಗೊಳ್ಳುವುದರ ಜೊತೆಗೆ ಕುಸಿದ ಸೇತುವೆಯನ್ನು ಸಮರ್ಪಕ ರೀತಿಯಲ್ಲಿ ಸರಿಪಡಿಸಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.