ಹುಬ್ಬಳ್ಳಿ, ಜ. 28: ಸಿಎಎ, ಎನ್.ಆರ್ ಸಿ ಕಾಯಿದೆ ವಿರೋಧಿಸಿ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳದ ವತಿಯಿಂದ ಶಾಸಕ ಪ್ರಸಾದ ಅಬ್ಬಯ್ಯ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಇಂದು ನಡೆಸಲಾಯಿತು.
ಸಂವಿಧಾನ ಸಂರಕ್ಷಣಾ ಸಮಿತಿಯ ವತಿಯಿಂದ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ವಿವಿಧ ದಲಿತ ಸಂಘಟನೆಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ಪ್ರಧಾನ ಅಂಚೆ ಕಚೇರಿ ಎದುರಿನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಲ್ಯಾಮಿಂಗ್ಟನ್ ರಸ್ತೆ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಚೆನ್ನಮ್ಮ ವೃತ್ತದ ಮೂಲಕ ತಹಶಿಲ್ದಾರರ ಕಚೇರಿ ತಲುಪಿ ನಂತರ ತಹಶಿಲ್ದಾರರ ಮೂಲ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, ಪೌರತ್ವ ಕಾಯಿದೆ ವಿರೋಧಿಸಿ ಅಲ್ಪಸಂಖ್ಯಾತ ಸಮುದಾಯ, ಪ್ರಗತಿಪರ ವೇದಿಕೆಗಳು ನಿರಂತರ ಹೋರಾಡ ಮಾಡುತ್ತಾ ಬಂದಿದ್ದು, ನಮ್ಮ ವಿರೋಧ ಇದೇ ರೀತಿ ಮುಂದುವರಿಯುತ್ತದೆ.
ಕೇಂದ್ರದ ಬಿಜೆಪಿ ಸರ್ಕಾರ ಪೌರತ್ವ ತಿದ್ದುಪಡಿ ಮಾಡಿ ದೇಶದ ಮುಸ್ಲಿಂರ ಜೊತೆಗೆ ಹಿಂದೂಗಳಿಗೂ ಅನ್ಯಾಯ ಮಾಡುತ್ತಿದ್ದು, ಇದು ಕರಾಳ ಕಾಯಿದೆ ಆಗಿದ್ದು, ಕೇವಲ ದಾಖಲೆಗಳ ಮೂಲಕವೇ ಪೌರತ್ವ ನೀಡುವುದು ಖಂಡನೀಯವಾಗಿದೆ. ಮೊದಲೇ ದೇಶ ಆರ್ಥಿಕವಾಗಿ ದಿವಾಳಿಯಾಗಿದ್ದು, ಈ ವೇಳೆ ಪೌರತ್ವ ಕಾಯಿದೆಗಾಗಿ ಕೋಟ್ಯಾಂತರ ರೂ ಖರ್ಚು ಮಾಡುತ್ತಿರುವುದು ಖಂಡನೀಯ, ಕೇಂದ್ರ ಸರ್ಕಾರ ಈ ಧೋರಣೆಯನ್ನು ಕೂಡಲೇ ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು.
ಮುಖಂಡರಾದ ವಿಜಯ ಕುಲಕರ್ಣಿ, ಮಹಾಮಂಡಳದ ಪಿತಾಂಬ್ರಪ್ಪ ಬಿಳಾರ, ಮಾರುತಿ ದೊಡ್ಡಮನಿ, ಗಣೇಶ ಟಗರಗುಂಟಿ, ಗಣೇಶ ದೊಡ್ಡಮನಿ, ಪ್ರಭು ಪ್ರಭಾಕರ ಸೇರಿದಂತೆ ಮುಂತಾದವರು ಇದ್ದರು.