ಹೈದರಾಬಾದ್: ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಪೋಷಕರು ಆಸ್ಪತ್ರೆಯಲ್ಲೇ ಅವರಿಗೆ ಮದುವೆ ಮಾಡಿಸಿದ ಘಟನೆಯೊಂದು ತೆಲಂಗಾಣದಲ್ಲಿರುವ ವಿಕರಾಬಾದ್ ಜಿಲ್ಲೆಯಲ್ಲಿ ನಡೆದಿದೆ.
19 ವರ್ಷದ ರೇಶ್ಮಾ ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಈಕೆ 21 ವರ್ಷದ ನವಾಜ್ ನನ್ನು ಪ್ರೀತಿಸುತ್ತಿದ್ದಳು. ರೇಶ್ಮಾ ಸಹೋದರಿ ನವಾಜ್ ಸಹೋದರನ ಜೊತೆ ಮದುವೆ ಆಗಿದ್ದಾರೆ. ರೇಶ್ಮಾ ಹಾಗೂ ನವಾಜ್ ನಡುವೆ ಪ್ರೀತಿ ಚಿಗುರೊಡೆದು ಮರವಾಗಿ ಬೆಳೆದಿದೆ.
ರೇಶ್ಮಾ, ನವಾಜ್ ನನ್ನು ಪ್ರೀತಿಸುತ್ತಿದ್ದ ವಿಷಯ ಪೋಷಕರಿಗೆ ಗೊತ್ತಾಗಿದೆ. ಬಳಿಕ ಆಕೆಯ ಪ್ರೀತಿ ನಿರಾಕರಿಸಿದ್ದರ ಹಿನ್ನೆಲೆಯಲ್ಲಿ ರೇಶ್ಮಾ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ರೇಶ್ಮಾ ಆತ್ಮಹತ್ಯೆಗೆ ಯತ್ನಿಸಿದ ವಿಷಯ ತಿಳಿದ ನವಾಜ್ ಆಕೆಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋಗುತ್ತಾನೆ. ಅಲ್ಲಿ ನವಾಜ್ ಕೂಡ ಅದೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವೈದ್ಯರು ರೇಶ್ಮಾ ಸೇವಿಸಿದ ಕ್ರಿಮಿನಾಶಕವನ್ನು ಪರಿಶೀಲಿಸುತ್ತಿದ್ದಾಗ ನವಾಜ್ ಅದನ್ನು ಕಸಿದುಕೊಂಡು ಆತನೂ ಅದನ್ನು ಸೇವಿಸಿದ್ದಾನೆ.
ಈ ಘಟನೆ ನಡೆದ ಬಳಿಕ ಈ ಇಬ್ಬರ ಕುಟುಂಬದವರು ಈ ವಿಷಯದ ಬಗ್ಗೆ ಚರ್ಚಿಸಿ ರೇಶ್ಮಾ ಹಾಗೂ ನವಾಜ್ ಒಟ್ಟಿಗೆ ಜೀವನ ಮಾಡಲಿ ಎಂದು ನಿರ್ಧರಿಸಿದರು. ಬಳಿಕ ಅದೇ ಆಸ್ಪತ್ರೆಯಲ್ಲೇ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.