ಹೈದರಾಬಾದ್, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಮಣ್ಣು ಕುಸಿದು ಬಿದ್ದು 10 ಮಹಿಳಾ ಕಾರ್ಮಿಕರು ಜೀವಂತ ಸಮಾಧಿಯಾದ ಘಟನೆ ತೆಲಂಗಾಣದ ನಾರಾಯಣ ಪೇಟೆ ಜಿಲ್ಲೆಯಲ್ಲಿ ನಡೆದಿದೆ.
ನಾರಾಯಣ ಪೇಟೆಯ ಮರಿಕಲ್ ಎಂಬ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕಾಲುವೆ ತೆಗೆಯುವ ಕಾಮಗಾರಿ ನಡೆಯುತ್ತಿತ್ತು. ತಳಭಾಗದಲ್ಲಿ ಮಹಿಳಾ ಕಾರ್ಮಿಕರು ಮಣ್ಣು ಹೊತ್ತು ಸಾಗಿಸುತ್ತಿದ್ದರು. ಬೆಳಿಗ್ಗೆ 11.15ರ ವೇಳೆ ಮಹಿಳೆಯರು ಊಟ ಮಾಡುವುದಕ್ಕಾಗಿ ಕುಳಿತಿದ್ದರು. ಆಗ ಇದ್ದಕ್ಕಿದ್ದಂತೆ ಕಾಲುವೆಯ ಮೇಲಿನ ದಿಬ್ಬದ ಮಣ್ಣು ಮೇಲಿನಿಂದ ಕುಸಿದು ಕಾರ್ಮಿಕರ ಮೇಲೆ ಬಿದ್ದಿದೆ. ಭಾರಿ ಪ್ರಮಾಣದ ಮಣ್ಣು ಬಿದ್ದಿದ್ದರಿಂದ ಕನಿಷ್ಠ 10 ಮಹಿಳೆಯರು ಜೀವಂತ ಸಮಾಧಿಯಾಗಿದ್ದಾರೆ.
12 ಮಹಿಳಾ ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದು, 2 ಮಹಿಳೆಯರಲ್ಲಿ ಒಬ್ಬರು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಬ್ಬ ಮಹಿಳೆ ಅದೃಷ್ಟವಶಾತ್ ಯಾವುದೇ ಅಪಾಯಕ್ಕೆ ಒಳಗಾಗದೆ ಪಾರಾಗಿದ್ದಾರೆ.