ಮಂಗಳೂರು, ಜು.19 : ಅಬ್ಬಾ! ಎರಡು ಗಂಟೆ ಸುರಿದ ಮಳೆ ನಗರದಲ್ಲಿ ಅವಾಂತರ ಸೃಷ್ಟಿಸುವುದರ ಜತೆಗೆ ಜನರನ್ನು ಮತ್ತೆ ಗಾಬರಿಗೊಳ್ಳುವಂತೆ ಮಾಡಿತ್ತು. ಮಳೆ ಕಡಿಮೆಯಾಗಿ ನೀರು ಇಳಿದುದರಿಂದ ನಿಟ್ಟುಸಿರುಬಿಟ್ಟರು.
ಹವಾಮಾನ ಇಲಾಖೆಯ ಆರೆಂಜ್ ಅಲರ್ಟ್ ಎಚ್ಚರಿಕೆ ನಡುವೆಯೇ ಮಂಗಳೂರಿನಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಅಬ್ಬರದ ಪ್ರವೇಶ ಮಾಡಿದ ಮಳೆ 10.30ರವರೆಗೆ ಸುರಿದು ಸುಧಾರಿಸಲು ಅವಕಾಶವೇ ನೀಡಿರಲಿಲ್ಲ. ಧಾರೆಯಾಗಿ ಸುರಿದ ನೀರು ಹರಿದು ಹೋಗಲು ಜಾಗವಿಲ್ಲದೆ, ತಗ್ಗುಪ್ರದೇಶವನ್ನೆಲ್ಲ ಆವರಿಸಿ ಬಿಟ್ಟಿತ್ತು. ಚರಂಡಿಗಳೂ ಈ ನೀರನ್ನು ತನ್ನೊಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲದೆ ರಸ್ತೆಯಲ್ಲೇ ಉಳಿಸಿಕೊಂಡಿತ್ತು. ಪರಿಣಾಮ ಮತ್ತೆ ಕೃತಕ ನೆರೆ ಆವರಿತ್ತು. ಆದರೆ ಮಳೆ ನಿಂತ ಕೆಲವೇ ಹೊತ್ತಿನಲ್ಲಿ ಮಳೆಯಾಗಿತ್ತಾ ಎನ್ನುಷ್ಟರ ಮಟ್ಟಿಗೆ ನೀರು ಹರಿದು ಹೋಗಿತ್ತು.