ಮಂಗಳೂರು: ಬಜ್ಪೆ ಸಮೀಪದ ಕುಪ್ಪೆಪದವು ಗ್ರಾಪಂ ವ್ಯಾಪ್ತಿಯ ಮಾಣಿಪಲ್ಲ ಗುಡ್ಡಕ್ಕೆ ಬೆಂಕಿ ಬಿದ್ದಿದ್ದು, 15 ಎಕರೆಗೂ ಹೆಚ್ಚು ಪ್ರದೇಶಕ್ಕೆ ಬೆಂಕಿಯ ಕೆನ್ನಾಲಿಗೆ ಹೊತ್ತಿ ಉರಿದಿದೆ.
ಬೆಂಕಿಯ ಕೆನ್ನಾಲಿಗೆಗೆ ಗುಡ್ಡದಲ್ಲಿನ ಅಕೇಶಿಯಾ ಮತ್ತಿತರ ಗಿಡ ಮರಗಳೂ ಸೇರಿದಂತೆ ಅನೇಕ ಔಷಧೀಯ ಗಿಡಮೂಲಿಕೆಗಳು ಸುಟ್ಟು ಕರಕಲಾಗಿವೆ. ಗುಡ್ಡದಲ್ಲಿದ್ದ ಹಾವು, ಮೊಲ, ಪಕ್ಷಿಗಳು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿವೆ.
ನಿನ್ನೆ ಸಂಜೆ ಸುಮಾರು 5 ಗಂಟೆಯ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಎಲ್ಲಾ ಕಡೆ ಪಸರಿಸಿದೆ. ಗುಡ್ಡಕ್ಕೆ ಹೊಂದಿಕೊಂಡಂತಿರುವ ರಸ್ತೆಯ ಪಕ್ಕದ ಬೆಂಕಿಯನ್ನು ಗ್ರಾಮಸ್ಥರು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಗುಡ್ಡದ ಮೇಲೆ ಬೆಂಕಿ ತಾಂಡವವಾಡುತ್ತಿದ್ದು ಅಗ್ನಿಶಾಮಕ ದಳದ ವಾಹನ ಬೆಂಕಿ ನಂದಿಸುವಲ್ಲಿ ಹರಸಾಹಸಪಟ್ಟಿದೆ. ಸಮರೋಪಾದಿಯಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದರೂ ಬೆಂಕಿ ಹೊತ್ತಿಕೊಳ್ಳುವುದು ಹೆಚ್ಚುತ್ತಿದೆ. ಮಾಣಿಪಲ್ಲ ಗ್ರಾಮದಲ್ಲಿ ೪೦-೪೫ ಮನೆಗಳಿದ್ದು ಅವರಲ್ಲಿ ಆತಂಕ ಮನೆಮಾಡಿದೆ.