ಬೆಂಗಳೂರು, ಜು. 5 : ಕೊಡಗಿನಲ್ಲಿ ವರುಣನ ಆರ್ಭಟ ಜೋರಾಗಿದ್ದು ಬುಧವಾರ ದಿನವಿಡೀ ಮಳೆ ಸುರಿದಿದೆ. ಮಡಿಕೇರಿ ಸೇರಿ ಹಲವೆಡೆ ಮಳೆಯಾಗಿದೆ. ಕುಶಲ ಅರ್ಚಕರ ಸಂಘದ ಆಶ್ರಯದಲ್ಲಿ ಕುಶಾಲನಗರದಲ್ಲಿ ಮಳೆಗಾಗಿ ಪೂಜೆ ಸಹ ಸಲ್ಲಿಸಲಾಗಿದೆ. ಚೇನಂಡ ಕುಟುಂಬದವರು ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಮಡಿಕೇರಿ ನಗರದಲ್ಲಿ ಪರಿಹಾರ ವಿತರಣೆ ಮಾಡಿದ್ದಾರೆ. ಕೊಡಗಿನ ವಿರಾಜಪೇಟೆ, ಬಿರುನಾಣಿಯಲ್ಲಿ ಅತ್ಯಧಿಕ 124 ಮಿಮೀ ಮಳೆಯಾಗಿದೆ.
ಕೊಲ್ಲೂರು, ಬಾಳೆಹೊನ್ನೂರು, ಕೊಟ್ಟಿಗೆಹಾರ, ಜಯಪುರ, ಗೆರುಸೊಪ್ಪಾ, ಕದ್ರಾ, ತಾಳಗುಪ್ಪ, ಕಾರವಾರ, ಭಟ್ಕಳ, ಕಿರವತ್ತಿ, ಕಳಸ, ಕೊಪ್ಪ, ಶೃಂಗೇರಿ ಸೇರಿದಂತೆ ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಲವು ಭಾಗಗಳು ಮಳೆ ಪಡೆದುಕೊಂಡಿವೆ.
24 ಗಂಟೆಯಲ್ಲಿ ಭಾರೀ ಮಳೆ : ಮುಂದಿನ ಒಂದು ದಿನದ ಅವಧಿಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗಲಿದೆ. ದಕ್ಷಿಣ ಮತ್ತು ಉತ್ತರ ಒಳನಾಡು ಭಾಗದಲ್ಲಿ ಸಾಸಾಧಾರಣ ಮಳೆಯಾಗಲಿದೆ ಎಂದು ಕರ್ನಾಟಕ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ.