ರಾಯಚೂರು, ಏ. 20, ನ್ಯೂಸ್ ಎಕ್ಸ್ ಪ್ರೆಸ್: ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದೊಂದು ಕೊಲೆ. ಪೊಲೀಸರಿಂದ ಬಂಧಿತ ಆರೋಪಿ ಸುದರ್ಶನ್ ಯಾದವ್ನಿಂದ ಮಧುಗೆ ನಿರಂತರ ಕಿರುಕುಳ ಆಗುತ್ತಿತು ಎಂದು ಅನುಮಾನಾಸ್ಪದ ರೀತಿಯಲ್ಲಿ ಇಂಜಿನಿಯರ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವು ಪ್ರಕರಣ ಬಗ್ಗೆ ಮೃತಳ ತಂದೆ-ತಾಯಿ ಆರೋಪಿಸಿದ್ದಾರೆ. ರಾಯಚೂರಿನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತಂದೆ ನಾಗರಾಜ್ ಮತ್ತು ತಾಯಿ ರೇಣುಕಾದೇವಿ, ಕಳೆದ ಆರು ತಿಂಗಳಿಂದ ಆರೋಪಿ ಸುದರ್ಶನ್ ಯಾದವ್ ತೊಂದರೆ ಕೊಡುತ್ತಿದ್ದ, ಕಾಲೇಜಿಗೆ ತೆರಳುವ ವೇಳೆ ಹಾಗೂ ಮನೆಯ ಬಳಿ ಸುಳಿದಾಡಿ ಆರೋಪಿಯಿಂದ ಕಿರುಕುಳ ನೀಡುತ್ತಿದ್ದ ಎಂದರು. ಅಲ್ಲದೇ ಮಗಳು ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಲು ತೆರಳಿದಾಗ, ಸುದರ್ಶನ್ ಯಾದವ್ ಅವರ ಮಾವ, ನಗರದ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಆಂಜನೇಯ ಅವರಿಂದ ಕೇಸ್ ದಾಖಲಿಸಿಕೊಳ್ಳಲು ನಿರಾಕರಣೆ ಮಾಡಿದ್ದಾರೆ. ಅದರಿಂದ ತನಿಖೆ ವಿಳಂಬವಾಗಿದೆ. ಮಗಳ ಶವ ಪತ್ತೆಗೂ ಮೊದಲೇ ಆಂಜನೇಯ ತಮ್ಮ ಮಗಳ ಮೊಬೈಲ್ ಮತ್ತು ಬೈಕ್ ತಮಗೆ ವಾಪಸ್ ನೀಡಿದ್ದರು. ಅವರು ಆರೋಪಿಯನ್ನು ರಕ್ಷಿಸಲು ನಿಂತಿರುವುದು ಸ್ಪಷ್ಟವಾಗಿದೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮೃತಳ ಪಾಲಕರು ಒತ್ತಾಯಿಸಿದ್ದಾರೆ.
ಸದ್ಯ ಈ ಘಟನೆಗೆ ಸಂಬಂಧಿಸಿ ಈಗಾಗಲೇ ದೂರು ದಾಖಲಾಗಿದೆ. ಪೊಲೀಸರು ನಡೆಸುವ ತನಿಖೆ ಮೇಲೆ ವಿಶ್ವಾಸವಿದೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಘಟನೆಗೆ ಸಂಬಂಧಿಸಿದಂತೆ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ನಾವು ತೀವ್ರ ಘಾಸಿಗೊಂಡಿದ್ದೇವೆ. ಕೇಸ್ ಬಗ್ಗೆ ಊಹಾಪೋಹ ವರದಿ ಮಾಡದಂತೆ ಮಾಧ್ಯದವರಿಗೆ ಪಾಲಕರು ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳು ಸಹ ಈ ವಿಚಾರಕ್ಕೆ ಹೋರಾಟ ಮಾಡುವ ಮೂಲಕ ಬೆಂಬಲಿಸಿದ್ದಾರೆ. ಆದರೆ ಈ ವಿಷಯ ಸೂಕ್ಷ್ಮವಾಗಿದ್ದು, ವಿವಿಧ ಮಾಧ್ಯಮಗಳ ಮೂಲಕ ಅನಗತ್ಯ ಗೊಂದಲ ಸೃಷ್ಟಿಸದಂತೆ ಮನವಿ. ಹೀಗೆ ಗೊಂದಲ ಮೂಡಿಸುವ ಮೂಲಕ ತಮ್ಮ ಮನಸಿಗೆ ಮತ್ತಷ್ಟು ನೋವು ಉಂಟು ಮಾಡದಂತೆ ಅಳಲು ತೊಡಿಕೊಂಡರು.