ಬೆಂಗಳೂರು, ಅ. 13: ಸರ್ಕಾರಿ ಕಾರ್ಯಕ್ರಮಗಳಿಗೆ ಮಾಧ್ಯಮದವರನ್ನು ನಿರ್ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಇಂತಹ ನಿರ್ಬಂಧಗಳು ಹೀಗೆ ಮುಂದುವರೆದರೆ ನಾನು ಮಾಧ್ಯಮದವರ ಜತೆ ಸೇರಿ ಉಗ್ರವಾಗಿ ಪ್ರತಿಭಟನೆ ನಡೆಸುತ್ತೇನೆ. ಮಾಧ್ಯಮದವರ ಜತೆ ನಾನು ಸದಾ ಇರುತ್ತೇನೆ ಎಂದರು.
ಈ ಹಿಂದೆ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರು ಸೆರೆವಾಸ ಅನುಭವಿಸಿದ್ದರು. ಇದನ್ನು ಬಿಜೆಪಿಯವರು ಗಮನದಲ್ಲಿಟ್ಟುಕೊಳ್ಳಬೇಕು. ಆಗಿನ ಹೋರಾಟದಲ್ಲಿ ಯಡಿಯೂರಪ್ಪ ಅವರು ಜೈಲಿಗೆ ಬಂದಿದ್ದರೋ, ಇಲ್ಲವೋ ಗೊತ್ತಿಲ್ಲ. ಆದರೆ ಬಿಜೆಪಿ ಹಿರಿಯ ನಾಯಕರಾದ ಅಡ್ವಾಣಿ, ವಾಜಪೇಯಿ, ಎ.ಕೆ. ಸುಬ್ಬಯ್ಯ ಅವರನ್ನೂ ಬೆಂಗಳೂರಿನ ಜೈಲಿಗೆ ಹಾಕಲಾಗಿತ್ತು ಎಂದು ನೆನಪಿಸಿಕೊಂಡರು.
ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಹರಣವಾದ ಸಂದರ್ಭದಲ್ಲಿ ಲಕ್ಷಾಂತರ ಆರ್ಎಸ್ಎಸ್ ಮುಖಂಡರ ಜತೆ ನಾನೂ ಹೋರಾಡಿದ್ದೆ. ಮಾಧ್ಯಮದವರನ್ನು ನಿರ್ಬಂಧಿಸಿದ್ದಕ್ಕೆ ಸ್ಪೀಕರ್ ಹೊಣೆಗಾರರಲ್ಲ. ಮುಖ್ಯಮಂತ್ರಿಗಳು ಹಾಗೂ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.