ಮಂಡ್ಯ, ಏ. 4, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಜಾತಿ ಸಂಘರ್ಷದ ಹೇಳಿಕೆ ನೀಡಿದ ಸಂಸದ ಎಲ್.ಆರ್. ಶಿವರಾಮೇಗೌಡ ವಿರುದ್ಧ ದೋಸ್ತಿ ಪಕ್ಷ ಕಾಂಗ್ರೆಸ್ ನ ಮುಖಂಡರು ದೂರು ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಾಯ್ಡು ಜಾತಿಯವರು. ಚಿತ್ರ ನಟ ದರ್ಶನ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ನಾಯ್ಡು ಜಾತಿಯವರು ಎಂದು ಶಿವರಾಮೇಗೌಡ ಹೇಳಿದ್ದರು. ಸುಮಲತಾ, ದರ್ಶನ್, ರಾಕ್ ಲೈನ್ ವೆಂಕಟೇಶ್ ಒಕ್ಕಲಿಗರಲ್ಲ, ಜಿಲ್ಲೆಯನ್ನು ನಾಯ್ಡುಮಯವಾಗಿ ಮಾಡಲು ಹೊರಟಿದ್ದಾರೆ ಎಂದು ಹೇಳುವ ಮೂಲಕ ಜಾತಿ ಹೆಸರಲ್ಲಿ ಅವಮಾನ ಮಾಡಿದ್ದಾರೆ. ಜಾತಿ ಸಂಘರ್ಷ ಉಂಟು ಮಾಡುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಶಿವರಾಮೇಗೌಡ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಅವರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೆ. ಕಬ್ಬಾಳಯ್ಯ ದೂರು ನೀಡಿದ್ದಾರೆ. ಸಂಸದರಾಗಿ ಸಂವಿಧಾನಬದ್ಧವಾಗಿ ಜವಾಬ್ದಾರಿಯುತ ಹೇಳಿಕೆ ನೀಡಬೇಕಿದ್ದ ಶಿವರಾಮೇಗೌಡ ಜಾತಿ ಹೆಸರಲ್ಲಿ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.