ಬೆಂಗಳೂರು, ಮಾ.13, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ನಗರದ ಅಷ್ಟದಿಕ್ಕುಗಳಲ್ಲೂ ನಾಕಾಬಂಧಿ ವಿಧಿಸಲಾಗಿದ್ದು, ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಿಂದ ಹೊರ ಹೋಗುವ ಹಾಗೂ ಒಳ ಬರುವ ಪ್ರಮುಖ ರಸ್ತೆಗಳಲ್ಲಿ ನಾಕಾಬಂಧಿ ನಿರ್ಮಿಸಲಾಗಿದ್ದು, ಎಟಿಎಂಗೆ ಹಣ ತುಂಬುವ ವಾಹನಗಳು, ಐಷಾರಾಮಿ ಕಾರುಗಳು ಹಾಗೂ ಬಸ್ಗಳ ತಪಾಸಣೆ ನಡೆಸಲಾಗುವುದು.
ನಿನ್ನೆಯಿಂದಲೇ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದ್ದು,ಇದುವರೆಗೂ ಯಾವುದೇ ಹಣ, ವಸ್ತುಗಳು ಇದುವರೆಗೂ ಪತ್ತೆಯಾಗಿಲ್ಲ. ಹಾಗೆಂದು ಅಧಿಕಾರಿಗಳು ಮೈಮರೆಯುವಂತಿಲ್ಲ. ಚುನಾವಣೆ ಮುಗಿಯುವವರೆಗೂ ಅಧಿಕಾರಿಗಳು ಹದ್ದಿನ ಕಣ್ಣಿಡಬೇಕು.
ಮತದಾರರಿಗೆ ಆಮಿಷವೊಡ್ಡುವ ವಸ್ತುಗಳು, ದಾಖಲೆ ಇಲ್ಲದ ಹಣ ದೊರೆತರೆ ಎಂತಹ ಪ್ರಭಾವಿ ವ್ಯಕ್ತಿಯಾಗಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.