ನವದೆಹಲಿ, ಮಾ.7, ನ್ಯೂಸ್ ಎಕ್ಸ್ ಪ್ರೆಸ್: ಲೋಕಪಾಲ ಸದಸ್ಯರ ನೇಮಕಾತಿಗಾಗಿ ಆಯ್ಕೆ ಸಮಿತಿಯ ಸಭೆ ದಿನಾಂಕವನ್ನು ತಿಳಿಸುವಂತೆ ಸುಪ್ರೀಂ ಕೋರ್ಟ್ ಇಂದು ಗುರುವಾರ ಕೇಂದ್ರ ಸರಕಾರಕ್ಕೆ ಹತ್ತು ದಿನಗಳ ಕಾಲಾವಕಾಶ ನೀಡಿತಲ್ಲದೆ ಯಾವುದೇ ಹೆಸರುಗಳನ್ನು ಬಹಿರಂಗಪಡಿಸದಂತೆ ಸೂಚಿಸಿತು.
ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ರಂಜನ ಪ್ರಕಾಶ್ ದೇಸಾಯಿ ನೇತೃತ್ವದ ಆಯ್ಕೆ ಸಮಿತಿಯು ಈಗಾಗಲೇ ಮೂರು ಮಂಡಳಿಗಳಿಗೆ ಹೆಸರುಗಳನ್ನು ಅಂತಿಮಗೊಳಿಸಿದೆ ಎಂದು ಆಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠಕ್ಕೆ ತಿಳಿಸಿದರು.
ಮೂರು ಮಂಡಳಿಗಳ ಪೈಕಿ ಒಂದು ಲೋಕಪಾಲ, ಮತ್ತು ಉಳಿದ ಎರಡರಲ್ಲಿ ಒಂದು ನ್ಯಾಯಾಂಗ ಮತ್ತು ಇನ್ನೊಂದು ನ್ಯಾಯಾಂಗೇತರ ಲೋಕಪಾಲ ಸದಸ್ಯರ ಪಟ್ಟಿಯನ್ನು ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಗೆ ಕೊಡಲಾಗಿದೆ ಎಂದ ಅಟಾರ್ನಿ ಜನರಲ್ ವೇಣುಗೋಪಾಲ್ ಕೋರ್ಟಿಗೆ ತಿಳಿಸಿದರು.
ಲೋಕಪಾಲರ ನೇಮಕಾತಿಯನ್ನು ಆದಷ್ಟು ಬೇಗನೆ ಮಾಡುವುದಕ್ಕಾಗಿ ಆಯ್ಕೆ ಸಮಿತಿಯ ಸಭೆಯನ್ನು ಶೀಘ್ರವೇ ನಡೆಸುವಂತೆ ಸಿಬಂದಿ ಮತ್ತು ತರಬೇತಿ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡುವುದಾಗಿ ಅಟಾರ್ನಿ ಜನರಲ್ ಕೋರ್ಟಿಗೆ ತಿಳಿಸಿದರು.