ಬೆಂಗಳೂರು, ಮಾ. 30: ವಿಶ್ವವ್ಯಾಪಿ ನಿದ್ದೆಗೆಡಿಸಿರುವ ಮಾರಕ ಕೊರೋನಾ ವೈರಸ್ ರಾಜ್ಯಕ್ಕೂ ವ್ಯಾಪಿಸಿದ್ದು, ಈಗಾಗಲೇ ಅರವತ್ತು ಜನ ಸೋಂಕಿನಿಂದ ಬಳಲುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೈಗೊಂಡಿರುವ ಲಾಕ್ಡೌನ್ ಆದೇಶ ಪಾಲಿಸುವುದು ನಮ್ಮೆಲ್ಲರ ಹೊಣೆಯಾಗಿದ್ದು ಪ್ರತಿಯೊಬ್ಬರು ಸಹಕರಿಸುವಂತೆ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ ಕ್ಷೇತ್ರದ ಜನತೆಗೆ ಮನವಿ ಮಾಡಿದ್ದಾರೆ.
ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರ ಎರಡು ತಿಂಗಳ ಪಡಿತರದೊಂದಿಗೆ ಐದು ಕೆಜಿ ಅಕ್ಕಿ ಒಂದು ಕೆಜಿ ಬೇಳೆ ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪಡಿತರ ಚೀಟಿ ಹೊಂದಿಲ್ಲದ ದೈನಂದಿನ ಕಾರ್ಮಿಕರು ಮತ್ತು ಅಗತ್ಯವಿರುವ ಜನರನ್ನ ಗುರ್ತಿಸಿ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ಆಯಾ ಕ್ಷೇತ್ರದ ಪಾಲಿಕೆ ಸದಸ್ಯರು ಸಂಘ ಸಂಸ್ಥೆಗಳು, ಕ್ಷೇಮಾಭಿವೃದ್ಧಿ ಸಂಸ್ಥೆಗಳ ಮೂಲಕ ಫಲಾನುಭವಿಗಳ ಮನೆಗಳಿಗೆ ನೇರವಾಗಿ ತಲುಪಿಸುವುದಾಗಿ ತಿಳಿಸಿದ್ದಾರೆ.
ಹಿರಿಯ ನಾಗರೀಕರು, ಗರ್ಭಿಣಿಯರು, ಗೃಹ ಬಂಧನದಲ್ಲಿರುವವರಿಗೆ ಅವಶ್ಯವಿರುವ ಔಷಧ ಹಾಗೂ ಆರೋಗ್ಯ ಕಿಟ್ ಗಳನ್ನು ಸರಬರಾಜು ಮಾಡುವುದಾಗಿ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಹಗಲಿರುಳೆನ್ನದೆ ಸಾರ್ವಜನಿಕರ ಒಳಿತಿಗಾಗಿ ಶ್ರಮಿಸುತ್ತಿರುವ ಪೊಲೀಸ್ ಇಲಾಖೆ, ವೈದ್ಯಕೀಯ ಇಲಾಖೆ ಹಾಗೂ ಪೌರಕಾರ್ಮಿಕರ ಸೇವೆಯನ್ನು ಇದೇ ವೇಳೆ ಶ್ಲಾಘಿಸಿದ್ದಾರೆ.
ಸಹಾಯವಾಣಿಗೆ ಸಂಪರ್ಕಿಸಿ
ಇಪ್ಪತ್ತು ದಿನಗಳ ಕಾಲ ಸ್ವಯಂ ನಿಯಂತ್ರಣ ಹೇರಿಕೊಂಡು ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಮೂಲಕ ಪ್ರತಿಯೊಬ್ಬರು ಕೊರೋನಾ ವಿರುದ್ದ ಹೋರಾಡಲಿ ಸನ್ನದ್ದರಾಗುವಂತೆ ಕರೆನೀಡಿರುವ ಶಾಸಕ ರಾಮಲಿಂಗಾರೆಡ್ಡಿ ಅವರು ಸಾರ್ವಜನಿಕರು ಯಾವುದೇ ರೀತಿಯ ಸಹಾಯದ ಅವಶ್ಯಕತೆ ಇದ್ದಲ್ಲಿ ಸಹಾಯವಾಣಿ 9341191411ಗೆ ನೇರವಾಗಿ ಸಂಪರ್ಕಿಸಲು ಕೋರಿದ್ದಾರೆ.