ಹುಬ್ಬಳ್ಳಿ, ಜೂನ್. 7, ನ್ಯೂಸ್ ಎಕ್ಸ್ ಪ್ರೆಸ್ : ‘ಮೊದ್ಲ ನಾವಳ್ಳಿ ಅಂದ್ರ ಎಲ್ಲೈತದು ಅಂತಿದ್ದೋರು, ಈಗ ಕುಮಾರಸ್ವಾಮಿ ಉಳಿದಿದ್ದ ಹಳ್ಳಿ ಅಲ್ಲೇನ್ರಿ ಅಂತ ಕೇಳ್ತಾರ್ರಿ, ನಮ್ಮೂರಿಗ ಬರಾ ಮೊದಲನೇ ಬಸ್ಸಿಗೆ ಕುಮಾರಸ್ವಾಮಿ ಬಸ್ಸ ಅಂತಾನೆ ಹೆಸ್ರು ಬಿದ್ದೈತ್ರಿ!’
ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಎಚ್.ಡಿ.ಕುಮಾರಸ್ವಾಮಿ ತಮ್ಮ ಕಲ್ಪನೆಯ ಗ್ರಾಮವಾಸ್ತವ್ಯದಡಿ 2006ರ ಅ.10ರಂದು ನವಲಗುಂದ ತಾಲೂಕಿನ (ಈಗ ಅಣ್ಣಿಗೇರಿ ತಾಲೂಕು) ಕುಗ್ರಾಮ ನಾವಳ್ಳಿಯಲ್ಲಿ ತಂಗಿದ್ದರು. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ವಾಸ್ತವ್ಯ ಹೂಡಿದ್ದ ಉಳಿದ ಗ್ರಾಮಗಳ ಪರಿಸ್ಥಿತಿ ಏನೇ ಇರಬಹುದು. ಆದರೆ, ನಾವಳ್ಳಿಯ ಜನ ಮಾತ್ರ 13 ವರ್ಷ ಕಳೆದರೂ ಈಗಲೂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯವನ್ನು ನೆನಪಿಸಿಕೊಳ್ಳುತ್ತಾರೆ. ಈ ಊರನ್ನೀಗ ಕುಮಾರಸ್ವಾಮಿ ಹೆಸರಿನಿಂದಲೇ ಗುರುತಿಸುತ್ತಿರುವುದು ಮತ್ತು ಊರಿಗೆ ಬರುವ ಮುಂಜಾನೆಯ ಮೊದಲ ಸಾರಿಗೆ ಬಸ್ಸಿಗೆ (ಅಂದು ಎಚ್ಡಿಕೆ ಭೇಟಿಗೆ ಗ್ರಾಮಸ್ಥರನ್ನು ಕರೆದುಕೊಂಡು ಊರಿನ ಕಡೆ ಬಂದ ಮೊದಲ ಬಸ್ ಇದು) ಜನ ಅವರ ಹೆಸರಿಟ್ಟು ಕರೆಯುತ್ತಿರುವುದೇ ಇದಕ್ಕೆ ಸಾಕ್ಷಿ.