ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಜೆಡಿಎಸ್ ಶಾಸಕರಿಗೆ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋವನ್ನ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಗುರುಮಿಠಕಲ್ ಎಂಎಲ್ಎ ನಾಗನಗೌಡಗೆ ಬಿಜೆಪಿ ಆಮೀಷವೊಡ್ಡಿದೆ ಎಂದು ಆರೋಪ ಮಾಡಿದರು. ಈ ಸಂಬಂಧ ನಾಗನಗೌಡ ಪುತ್ರ ಶರಣಗೌಡ ನಾಯಕ ಜೊತೆ ಬಿಎಸ್ವೈ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋವೊಂದನ್ನ ಪ್ಲೇ ಮಾಡಿದರು.
ಮೊದಲನೇ ಎಪಿಸೋಡ್ ಕೇವಲ ಟ್ರೈಲರ್, ನಾನೇ ರೆಕಾರ್ಡ್ ಮಾಡಿದ್ದೀನಿ. ಇದು ಬೆಳಗಿನ ಜಾವ ಸುಮಾರು 2-3 ಗಂಟೆ ವೇಳೆ ರೆಕಾರ್ಡ್ ಮಾಡಲಾದ ಆಡಿಯೋ ಎಂದು ಹೇಳಿದರು.
ಆಪರೇಷನ್ ಕಮಲದ ಬಗ್ಗೆ ವಾಗ್ದಾಳಿ ನಡೆಸಿದ ಸಿಎಂ, ಬಿಜೆಪಿಯವರು ತಮ್ಮ ಚಾಳಿ ಎಲ್ಲಿ ಬಿಡ್ತಾರೆ, ಅದು ಅವರ ಹುಟ್ಟು ಗುಣ. ಮೋದಿ ಬಂದ್ಮೇಲೆ ಬದಲಾಗ್ತಾರೆ ಎಂದುಕೊಂಡಿದ್ದೆ. ಭ್ರಷ್ಟಾಚಾರದ ಬಗ್ಗೆ ಮೋದಿ ಪಾಠ ಹೇಳಿಕೊಟ್ಟಿದ್ದಾರೆ. ಆದ್ರೆ ಇವರು ಕಲಿತಿಲ್ಲ ಎಂದರು. ಇಂದಿನ ಕಲಾಪ ಮೈತ್ರಿ ಸರ್ಕಾರದ ಕಲಾಪವಲ್ಲ ನಾಡಿನ ಜನರ ಬದುಕಿನ ಪ್ರಶ್ನೆ. ಇದರಲ್ಲಿ ಚೆಲ್ಲಾಟವಾಡಬೇಡಿ. ಬಜೆಟ್ನ ಅನುಕೂಲ, ಅನಾನುಕೂಲತೆ ಬಗ್ಗೆ ಚರ್ಚೆ ಮಾಡಿ. ರಾಜ್ಯಪಾಲರಿಗೆ, ಅಧ್ಯಕ್ಷರಿಗೆ ಅಗೌರವ ತೋರುವ ರೀತಿ ನಡೆದುಕೊಂಡ್ರೆ ನಿಮ್ಮ ಬಗ್ಗೆ ಜನ ತೀರ್ಮಾನ ಮಾಡ್ತಾರೆ ಎಂದರು.