ಬೆಂಗಳೂರು , ಸೆ. 11 : ಕೌಟುಂಬಿಕ ಕಲಹ ಹಿನ್ನಲೆ ಮಕ್ಕಳ ಜೊತೆ ಪತ್ನಿ ಮನೆಬಿಟ್ಟು ಹೋದ ಕಾರಣ ನೊಂದ ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಾಲ್ಮೀಕಿ ನಗರ ನಿವಾಸಿ ರಾಮಾಂಜನೇಯ ಮೃತ ದುರ್ದೈವಿ. ಈತನ ಪತ್ನಿ ಭವ್ಯ ತನ್ನ ಇಬ್ಬರು ಮಕ್ಕಳ ಜೊತೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಪತ್ನಿ ಒಂದು ಮಾತು ಹೇಳದೇ ಹೋಗಿದ್ದಕ್ಕಾಗಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ರಾಮಾಂಜನೇಯ ತಾಯಿ ರಂಗಮ್ಮ ಮನೆಗೆ ಬಂದು ಹಲವು ಬಾರಿ ಬಾಗಿಲು ತಟ್ಟಿದ್ದಾರೆ, ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅಕ್ಕಪಕ್ಕದವರನ್ನು ಕರೆದು ಬಾಗಿಲು ಮುರಿಸಿದ್ದಾರೆ. ಒಳಗೆ ಬಂದಾಗ ಪ್ಯಾನಿಗೆ ನೇಣು ಹಾಕಿಕೊಂಡಿರುವುದು ತಿಳಿದು ಬಂದಿದೆ. ತಾಯಿ ರಂಗಮ್ಮ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.