ಚಾಮರಾಜನಗರ, ಏ. 2, ನ್ಯೂಸ್ ಎಕ್ಸ್ ಪ್ರೆಸ್: ಈಗ ಕೊಳ್ಳೇಗಾಲದಲ್ಲಿ 30 ಮಂದಿ ಮಾಂತ್ರಿಕರು ಸಕ್ರಿಯರಾಗಿದ್ದಾರೆ ಎಂದು ಬಲ್ಲ ಮೂಲಗಳು ಖಚಿತ ಪಡಿಸಿವೆ. ಈಗಾಗಲೇ ಜಿಲ್ಲೆಯ ಹಾಗೂ ಇನ್ನಿತರ ರಾಜಕಾರಣಿಗಳು ತಮ್ಮ ಆಪ್ತರ ಮೂಲಕ ಪ್ರತ್ಯಂಗಿರ ಹೋಮ, ರಾತ್ರಿ ಹೊತ್ತು ಸ್ಮಶಾನದಲ್ಲಿ ಪೂಜೆ, ನದಿ ಪಾತ್ರದಲ್ಲಿ ಬಲಿ ಪೂಜೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಗೆಲ್ಲಲ್ಲೇ ಬೇಕೆಂಬ ಮರ್ಜಿಗೆ ಕೆಲವರು ವಾಮ ಮಾರ್ಗ ಹಿಡಿಯುವುದು ಸಹಜ ಎಂಬುದು ಹೆಸರು ಹೇಳದ ಹಿರಿಯ ಮಾಂತ್ರಿಕನ ಮಾತಾಗಿದೆ. ಈ ಕುರಿತು ಕೊಳ್ಳೇಗಾಲದ ಜ್ಯೋತಿಷಿ ಟಿ. ವಿ. ಎಸ್. ರಾಘವನ್ ಮಾತನಾಡಿ, ಚುನಾವಣೆ ವೇಳೆ ಕೆಲವು ರಾಜಕಾರಣಿಗಳು, ಸಿನಿಮಾ ಬಿಡುಗಡೆ ಸಮಯದಲ್ಲಿ ಕೆಲವು ಚಿತ್ರನಟರು ಕ್ಷುದ್ರಶಕ್ತಿ ಮೊರೆ ಹೋಗುತ್ತಾರೆ. ಹಿಂದೆ, ಕೊಳ್ಳೇಗಾಲದಲ್ಲಿ ಆ ರೀತಿಯ ಶಕ್ತಿಯಿದ್ದ ಮೋಡಿಗಾರರು, ಮಾಂತ್ರಿಕರಿದ್ದರು. ಈಗ ಕೇವಲ ಕೊಳ್ಳೇಗಾಲದ ನಾಮ ಬಲದ ಮೇಲೆ ಮೋಸ ಮಾಡುತ್ತಿದ್ದಾರೆ. ಅಮೆರಿಕದಲ್ಲೂ ಕೂಡ ಕೊಳ್ಳೇಗಾಲದ ಹೆಸರು ಹೇಳಿ ವಂಚಿಸುವರಿದ್ದಾರೆ. ವಾಮಾರ್ಗದ ಕಾರ್ಯ ಎಂದಿಗೂ ಕೆಡಕೇ, ಮತ್ತೊಂದು ವಿಚಾರವೆಂದರೇ ಅಸಲಿ ಮಾಂತ್ರಿಕರೇ ಕೊಳ್ಳೇಗಾಲದಲ್ಲಿ ಈಗಿಲ್ಲ ಎಂದರು. ಒಟ್ಟಿನಲ್ಲಿ ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾಗಿರುವ ಚುನಾವಣೆಯಲ್ಲಿ ಮತದಾರರೇ ಪ್ರಭುಗಳಾಗಿದ್ದು, ಅವರು ನಿಶ್ಚಯಿಸಿದರೇ ಮಾತ್ರ ತಮ್ಮ ಗೆಲುವೆಂದು ವಾಮಮಾರ್ಗಕ್ಕೆ ಅಂಟಿಕೊಂಡಿರುವ ರಾಜಕಾರಣಿಗಳು ತಿಳಿಯಲಿ.