ಕಲಬುರಗಿ, ಜ.07: ನಗರದ ಪಿ ಅಂಡ್ ಟಿ ಕಾಲೋನಿ ಬಳಿ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು ವ್ಯಕ್ತಿಯು ತೀವ್ರತರದ ಗಾಯಗಳಿಗೆ ತುತ್ತಾಗಿದ್ದಾನೆ.
ಇಸ್ಲಾಮುದ್ದೀನ್ ಎಂಬಾತ ಹಲ್ಲೆಗೆ ಒಳಗಾಗಿದ್ದು, ಈತನ ಮೇಲೆ ಐದಾರು ಜನರಿದ್ದ ಗುಂಪಿನಿಂದ ಹಲ್ಲೆ ನಡೆದಿದೆ. ಹಲ್ಲೆಕೋರರು ಬಡಿಗೆಯಿಂದ ಹೊಡೆದು, ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ. ಹೊಟ್ಟೆಗೆ ಬಲವಾಗಿ ಚಾಕಿವಿನಿಂದ ಇರಿಯಲಾಗಿದ್ದು, ಮನಬಂದಂತೆ ಥಳಿಸಲಾಗಿದೆ.
ಕಳೆದ ಹಲವು ದಿನಗಳಿಂದ ನಗರದ ಜಗತ್ ವೃತ್ತದಲ್ಲಿ ಪೌರತ್ವ ವಿರೋಧಿ ಹೋರಾಟ ನಡೆದಿತ್ತು. ಇದರಲ್ಲಿ ಇಸ್ಲಾಮುದ್ದೀನ್ ಸಕ್ರಿಯವಾಗಿ ಭಾಗವಹಿಸಿದ್ದ. ಅದೇ ಸೇಡಿನ ಹಿನ್ನೆಲೆಯಲ್ಲಿ ಆತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಗಾಯಾಳುವನ್ನು ಯುನೈಟೆಡ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಸಿಪಿಐಎಂ ಮುಖಂಡ ಮಾರುತಿ ಮಾನ್ಪಡೆ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಕೆಲ ಕೋಮುವಾದಿಗಳು ಪೌರತ್ವ ವಿರೋಧಿ ಹೋರಾಟಗಾರರನ್ನು ಟಾರ್ಗೆಟ್ ಮಾಡಿದ್ದು, ಅದರ ಪರಿಣಾಮವಾಗಿ ಈ ಹಲ್ಲೆ ನಡೆಸಲಾಗಿದೆ. ಇಸ್ಲಾಮುದ್ದೀನ್ ಕೊಲೆಗೆ ಯತ್ನಿಸಿದ್ದು, ಆತ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ಇಸ್ಲಾಮುದ್ದೀನ್ ಯುನೈಟೆಡ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.