ಬೆಂಗಳೂರು, ಅ. 5: ಮಳೆ ಬಂದರೆ ಮಳೆ ಜೊತೆ ಸಮಸ್ಯೆಗಳು ಹೊತ್ತು ಬರುತ್ತವೆ. ಕಳೆದ ರಾತ್ರಿ ಸುರಿದ ಮಳೆಯಿಂದ ಕೆಲವು ಕಡೆ ನೀರು ನುಗ್ಗಿದರೆ ಮತ್ತೇ ಕೆಲವು ಕಡೆ ಮರ ನೆಲಕ್ಕುರುಳಿವೆ. ಬಿಬಿಎಂಪಿ ಕಚೇರಿ ಸಿಬ್ಬಂದಿ ಏನು ಮಾಡುತ್ತಿದ್ದಾರೆ ಎಂದು ನೂತನ ಮೇಯರ್ ಗೌತಮ್ ಕುಮಾರ್ ಕೆಂಡಾಮಂಡಲರಾಗಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟು ಬಿಡದೆ ಬರುತ್ತಿದ್ದ ಮಳೆರಾಯ ಶುಕ್ರವಾರ ರಾತ್ರಿ ಬೆಂಗಳೂರಿನ ಮೇಲೆ ಕೋಪ ಮಾಡಿಕೊಂಡಿದ್ದ ಅನಿಸುತ್ತೆ. ಸಂಜೆ 4 ಗಂಟೆಯಿಂದ ಪ್ರಾರಂಭವಾಗಿ ರಾತ್ರಿ 9 ಗಂಟೆವರೆಗೂ ಬಿಟ್ಟು ಬಿಡೆದೆ ಸುರಿದು ಅವಾಂತರ ಸೃಷ್ಟಿಸಿದ್ದ. ಮಳೆ ಜೋರಾಗಿದ್ದ ಪರಿಣಾಮ ಇಂದಿರಾನಗರ, ಬಾಣಸವಾಡಿ, ಬೇಗೂರುಗಳಲ್ಲಿ ನಾಲ್ಕುಮರ ಧರೆಗುರುಳಿವೆ.
ಪೂರ್ವದ ಕೆ.ಆರ್.ಪುರ, ಈಶಾನ್ಯದ ಮಮಗಮ್ಮನಪಾಳ್ಯ, ದಕ್ಷಿಣದ ಬೇಗೂರು, ಉತ್ತರ ಭಾಗದ ಹೆಬ್ಬಾಳ ಯಲಹಂಕಗಳಲ್ಲಿ ಜೋರು ಮಳೆ. ಮಳೆ ಅವಾಂತರಗಳಿಗೆ ಸ್ಪಂದಿಸಬೇಕಿದ್ದ ಬಿಬಿಎಂಪಿ ಕಚೇರಿಲಿ ಕರ್ತವ್ಯನಿರತ ಸಹಾಯಕ ಇಂಜಿನಿಯರ್ ಮಂಜುನಾಥ್, ಸಹಾಯಕ ಅರಣ್ಯಾಧಿಕಾರಿ ಕಚೇರಿಗೆ ಬರದೆ ಚಕ್ಕರ್ ಹಾಕಿದ್ದರು.ಕಚೇರಿಗೆ ಆಗಮಿಸಿದ ನೂತನ ಮೇಯರ್ ಗೌತಮ್ ಕುಮಾರ್ ಇದರಿಂದ ಕೆಂಡಾಮಂಡಲರಾದರು.
ದೇವನಹಳ್ಳಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಗೆ ಸಂಪರ್ಕಕೊಂಡಿಯಂತಿರುವ ಯಲಹಂಕ ಮತ್ತು ಹೆಬ್ಬಾಳಗಳಲ್ಲಿ ನೆನ್ನೆ ನಾಲ್ಕು ಗಂಟೆಗೆ ಪ್ರಾರಂಭವಾದ ಮಳೆ ರಾತ್ರಿ ೯ ಗಂಟೆವರೆಗೂ ಬಿಟ್ಟು ಬಿಟ್ಟು ಸುರಿದಿದೆ.ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿತ್ತು. ಕೆ.ಆರ್.ಪುರ, ಬೇಗೂರಿನ ವಿಶ್ವಪ್ರಿಯ ಲೇಔಟ್, ಮಂಗಮ್ಮನಪಾಳ್ಯ, ರಾಮೂರ್ತಿನಗರದ ಅಪಾರ್ಟ್ಮೆಂಟ್ಗಳ ಮನೆಗಳಿಗೆ, ರಸ್ತೆಗಳಿಗೆ ನೀರು ನುಗ್ಗಿ ತೀವ್ರ ಸಮಸ್ಯೆ ಅನುಭವಿಸುವಂತಾಗಿತ್ತು.
ಜನರ ಕಷ್ಟಗಳಿಗೆ ಸ್ಪಂದಿಸಬೇಕಿದ್ದ ಬಿಬಿಎಂಪಿ ಸಿಬ್ಬಂದಿಯ ಬೇಜವಾಬ್ದಾರಿಗೆ ನೂತನ ಮೇಯರ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಮೂರ್ನಾಲ್ಕು ದಿನ ಬೆಂಗಳೂರು ಸುತ್ತಮುತ್ತ ಮಳೆಯಾಗುವ ಸಾದ್ಯತೆಯನ್ನ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಹಾಗಾಗಿ ಮಳೆಯಿಂದ ಎದುರಾಗಬಹುದಾದ ಸಮಸ್ಯೆಗಳಿಗೆ ಸಿಬ್ಬಂದಿ ಸ್ಪಂದಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.