ಕವಿತಾಳ, ಮಾ.29, ನ್ಯೂಸ್ ಎಕ್ಸ್ ಪ್ರೆಸ್: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆ ಸರಿಪಡಿಸಿ ಆಗತ್ಯ ಸೌಲಭ್ಯಗಳನ್ನು ಒದಗಿಸಿ ಇಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ನವ ನಿರ್ಮಾಣ ವೇದಿಕೆ ಆಗ್ರಹಿಸಿದೆ.
ಇಂದು ನಗರದ ಸಿಆರ್ಸಿ ಕೊಠಡಿಯಲ್ಲಿ ಸುದ್ದಿಘೋಷ್ಠಿಯನ್ನುದ್ದೇಶಿಸಿ ನವ ನಿರ್ಮಾಣ ವೇದಿಕೆಯ ಅಧ್ಯಕ್ಷ ಶಿವಕುಮಾರ ಮ್ಯಾಗಳಮನಿ ಮಾತನಾಡಿ, ಪಟ್ಟಣದಲ್ಲಿರುವ ಆರೋಗ್ಯ ಕೇಂದ್ರವು ತಾಲೂಕಿನ ಏಕೈಕ ಕೇಂದ್ರವಾಗಿದ್ದು, ಶುದ್ಧ ಕುಡಿಯುವ ನೀರು, ಶೌಚಾಲಯ, ಇಸಿಜಿ ಸೌಲಭ್ಯಗಳಂತಹ ಕನಿಷ್ಟ ಮೂಲಭೂತ ಸೌಲಭ್ಯಗಳಿಲ್ಲದೇ ಸಂಪೂರ್ಣವಾಗಿ ವಂಚಿತವಾಗಿ ನರಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೇ ನರಕಯಾತನೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಕೇಂದ್ರಕ್ಕೆ ಬೇಕಾದ ಅಗತ್ಯ ಸೌಲಬ್ಯಗಳನ್ನು ನೀಡಿ ಆಸ್ಪತ್ರೆಯನ್ನು ಬಲಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಅಲ್ಲದೇ ಆಸ್ಪತ್ರೆಯ ಸಿಬ್ಬಂದಿ ರೋಗಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಹಾಗೂ ಔಷಧಿಗಳನ್ನು ಹೊರಗೆ ತಗೆದುಕೊಳ್ಳಲು ಹೇಳುತ್ತಾರೆ. ಇಂತಹ ಬೇಜವಾಬ್ದಾರಿ ಅಧಿಖಾರಿಗಳ ಮೇಲೆ ಸೂಕ್ತ ಕಾನೂನು ಜರುಗಿಸಬೇಕು. ಗರ್ಭಿಣಿಯರಿಗೆ ಸರಿಯಾದ ಸಮಯಕ್ಕೆ ಹೆರಿಗೆ ಭತ್ಯೆ ಹಾಗೂ ಇತರ ಸೌಲಭ್ಯ ನೀಡಲು ಅಸಡ್ಡೆ ತೋರುವ ಸಿಬ್ಬಂದಿ ಮೇಲೆ ಕ್ರಮ ಜರುಗಿಸಬೇಕು. ಆಸ್ಪತ್ರೆಯಲ್ಲಾಗುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಶಿವಕುಮಾರ್ ಮ್ಯಾಗಳಮನಿ ಆಗ್ರಹಿಸಿದರು.
ಗೌರವಧ್ಯಕ್ಷ ಭೀಮನಗೌಡ ವಂದ್ಲಿ ಮಾತನಾಡಿದರು.
ಈ ಸಂಧರ್ಭದಲ್ಲಿ ವೇದಿಕೆಯ ಮುಖಂಡರಾದ ಶಿವಣ್ಣ ವಕೀಲ, ಮಹಮ್ಮದ್ ರಫೀ ಬೊದಲ್, ಸದ್ದಾಂ ಹುಸೇನ್, ಶೇಕರಪ್ಪ ಹಟ್ಟಿ, ಇಸ್ಮಾಯಿಲ್ ಸಾಬ್, ಮಲ್ಲಪ್ಪ ಬಸ್ಸಾಪುರ, ಜಹಾಂಗೀರ್ ಪಾಷ, ಅಜಂ ಸಾಬ್, ಈರಣ್ಣ ಕೆಳಗೇರಿ, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.