ಬೆಂಗಳೂರು, ಜು. 1: ದೊಡ್ಡಬಳ್ಳಾಪುರ ತಾಲೂಕಿನ ಪಾಲ್ಪಾಲ್ದಿನ್ನೆ ಗ್ರಾಮದ ಎನ್.ವೆಂಕಟೇಶ್ ಅವರ ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ‘ಮನೆಯಂಗಳದಲ್ಲಿ ಸಾಹಿತ್ಯ’ಕಾರ್ಯಕ್ರಮ ನಡೆಯಿತು.
ಸಾಮಾಜಿಕ ಕಳಕಳಿ ಮತ್ತು ಪ್ರಚಾರ ಪ್ರಿಯತೆ ಕುರಿತು ಮಾತನಾಡಿದ ಗಂಗರಾಜ, ಶಿರವಾರ ‘ಬಹುತೇಕ ಜನರ ಸಾಮಾಜಿಕ ಕಳಕಳಿ ಕೇವಲ ಪ್ರಚಾರಕ್ಕಷ್ಟೇ ಸೀಮಿತವಾಗಿದೆ. ವಾಟ್ಸ್ಆ್ಯಪ್ ಹಾಗೂ ಫೇಸ್ಬುಕ್ಗಳಲ್ಲಿ ತೋರ್ಪಡಿಕೆಗೆ ಸೀಮಿತವಾಗಿದೆ. ಸಾಮಾಜಿಕ ಕಳಕಳಿಯ ಪೋಟೋ ಹಾಕಲು ಹಾತೊರೆಯುವ ಯುವ ಸಮೂಹದಿಂದ ನೈಜ ಕಳಕಳಿಯ ಅವಶ್ಯಕತೆ ಇದೆ. ಅದಾಗದಿದ್ದರೆ ಜಡ್ಡು ಗಟ್ಟಿದ ಸಮಾಜದ ಬದಲಾವಣೆಯ ನಿರೀಕ್ಷೆ ಹುಸಿಯಾಗುತ್ತದೆ’ ಎಂದರು.
‘ಅವಶ್ಯಕತೆ ಹಾಗೂ ಅಭಿರುಚಿಗೆ ತಕ್ಕಂತೆ, ಪ್ರಚಾರದ ಗುಂಗಿಗೆ ಒಳಗಾಗದೆ ಕೆಲಸ ಮಾಡಬೇಕು. ನೈಜ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯಿಂದ ಮಾತ್ರ ಸಮಾಜ ಸುಧಾರಣೆ ಆಗಬಹುದೇ ಹೊರತು ಸ್ವಪ್ರಚಾರ ಹಾಗೂ ಸ್ವಪ್ರಶಂಶೆಯಿಂದ ಅಲ್ಲ’ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಮೀಳ ಮಹಾದೇವ ಪ್ರಾಸ್ತಾವಿಕವಾಗಿ ಮಾತನಾಡಿ, ‘ಸಾಹಿತ್ಯ ಪರಿಷತ್ ನಾಡು ನುಡಿ ಕಟ್ಟುವಲ್ಲಿ ಶ್ರಮಿಸುತ್ತಿದೆ. ಮನೆಯಂಗಳದ ಕಾರ್ಯಕ್ರಮಗಳಿಂದ ಜನಸಾಮಾನ್ಯರು, ಗೃಹಿಣಿಯರು, ಮಕ್ಕಳು ಹಾಗೂ ಯುವಸಮೂಹದಲ್ಲಿ ಸಾಹಿತ್ಯ ಅಭಿರುಚಿ ಬೆಳೆಯುತ್ತದೆ’ ಎಂದರು.
ಮನೆಯಂಗಳದ ಕಾರ್ಯಕ್ರಮ ಪ್ರಾಯೋಜಕಿ ಭಾರತಿ ವೆಂಕಟೇಶ್ ಉದ್ಘಾಟನೆ ಮಾಡಿದರು. ಮೇಲಿನಜೂಗಾಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡರಾದ ಮಂಜುಳಾ ರಾಜಣ್ಣ, ಹರಿಕುಮಾರ್, ಕಸಾಪ ಕಾರ್ಯಾಧ್ಯಕ್ಷ ತರಿದಾಳ್ ಶ್ರೀನಿವಾಸ್, ನಗರ ಉಪಾಧ್ಯಕ್ಷ ಸೂರ್ಯನಾರಾಯಣ್ ಇದ್ದರು.